ಬೆಂಗಳೂರಿನಲ್ಲಿ ಮನೆ ಮಾಲೀಕರಿಂದ ಇದೆಂಥಾ ದರ್ಪ?

ಬೆಂಗಳೂರಿನಲ್ಲಿ ಮನೆ ಮಾಲೀಕರ ದರ್ಪದ ಘಟನೆಯೊಂದು ಮಾನವೀಯತೆಯನ್ನೇ ಮರೆಸುವಂತೆ ನಡೆದಿದ್ದು, ಬಾಡಿಗೆದಾರರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಗ್ಯಾಸ್ ದರ ಏರಿಕೆಯ ನೆಪವೊಡ್ಡಿ ನೀರಿನ ಬಿಲ್ ಹಾಗೂ ಮನೆಯ ಬಾಡಿಗೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕೆಂದು ಒತ್ತಾಯಿಸಿದ ಮಾಲೀಕರು, ಇದಕ್ಕೆ ಒಪ್ಪದ ಬಾಡಿಗೆದಾರರಿಗೆ ಕೂಡಲೇ ಮನೆ ಖಾಲಿ ಮಾಡುವಂತೆ ಕಿರಿಕ್ ಆರಂಭಿಸಿದ್ದಾರೆ. ಬಾಡಿಗೆದಾರ ನರೇಶ್ ಅವರು ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಮಾಲೀಕ ದೇವರಾಜ್, ಶೋಭಾ ಮತ್ತು ಅವರ ಕುಟುಂಬದವರು ಚಾಕು ಹಾಗೂ ಬ್ಲೇಡ್ನಿಂದ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವಿಕೃತಿ ಇಷ್ಟಕ್ಕೇ ನಿಲ್ಲದೆ, ನರೇಶ್ ಅವರ ಮಗಳ ಮೇಲೆಯೂ ದರ್ಪ ತೋರಲಾಗಿದ್ದು, ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಆಕೆಯ ಮೇಲೆ ನೀರು ಸುರಿದ ವಿಕೃತಿ.
ಮಾರ್ಚ್ 29ರಂದು ನಡೆದ ಈ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಣದಾಸೆಗಾಗಿ ಮತ್ತು ಸಣ್ಣಪುಟ್ಟ ಕಾರಣಗಳಿಗಾಗಿ ಬಾಡಿಗೆದಾರರ ಮೇಲೆ ಇಂತಹ ಭೀಕರ ಹಲ್ಲೆ ನಡೆಸಿರುವುದು ನಗರದಲ್ಲಿ ವಾಸಿಸುವ ಸಾಮಾನ್ಯ ಜನರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.




