ಬೆಂಗಳೂರು : ಕಸ ವಿಲೇವಾರಿ ವಿಚಾರವು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಕಿಡಿ ಹೊತ್ತಿಸಿದೆ. ದೊಡ್ಡಬಳ್ಳಾಪುರಕ್ಕೆ ನಿಯಮಬಾಹಿರವಾಗಿ ಕಸ ಸಾಗಿಸಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ. ಬಿಜೆಪಿಯ ಎಲ್ಲಾ ಶಾಸಕರು ಬ್ಲ್ಯಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಪಡೆಯುವ ಉದ್ದೇಶದಿಂದ ಅಪಘಾತದ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಕಸ ಎಲ್ಲಾದರೂ ಒಂದು ಕಡೆ ವಿಲೇವಾರಿಯಾಗಲೇಬೇಕು ಎಂದು ಪ್ರತಿಪಾದಿಸಿದ ಡಿಸಿಎಂ, “ಅಲ್ಲೂ ಬೇಡ, ಇಲ್ಲೂ ಬೇಡ ಎಂದರೆ ಎಲ್ಲಿಗೆ ಹೋಗಬೇಕು?” ಎಂದು ಪ್ರಶ್ನಿಸಿದರು. ಪ್ರತಿಭಟನೆ ನಡೆಸುತ್ತಿರುವ ಶಾಸಕರಿಗೆ ಎಚ್ಚರಿಕೆ ನೀಡಿದ ಅವರು, ಒಂದು ವೇಳೆ ಪರಿಸ್ಥಿತಿ ಮಿತಿಮೀರಿದರೆ ಪ್ರತಿಭಟನೆ ನಡೆಸುತ್ತಿರುವ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿಯ ಮುಂದೆಯೇ ಕಸ ಹಾಕಿಸಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ, ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA) ಅಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಎಲ್ಲರೂ ಗೌರವದಿಂದ ವರ್ತಿಸಿದರೆ ಸರಿ, ಇಲ್ಲದಿದ್ದರೆ ಕಾನೂನು ಕ್ರಮ ಅನಿವಾರ್ಯವಾಗುತ್ತದೆ. ಕಸ ವಿಲೇವಾರಿ ವಿಚಾರದಲ್ಲಿ ನಾವು ಯಾವುದೇ ಕರುಣೆ ತೋರಿಸುವುದಿಲ್ಲ ಎಂದು ತಿಳಿಸಿದರು. ರಾಜಕೀಯ ಲಾಭಕ್ಕಾಗಿ ಕಸದ ಸಮಸ್ಯೆಯನ್ನು ದೊಡ್ಡದು ಮಾಡುತ್ತಿರುವ ಬಿಜೆಪಿ ನಾಯಕರ ನಡೆಗೆ ಡಿಕೆಶಿ ನೀಡಿದ ಈ ಖಡಕ್ ಪ್ರತಿಕ್ರಿಯೆ ಈಗ ಹೊಸ ಸಂಚಲನ ಮೂಡಿಸಿದೆ. ಅರವಿಂದ ಲಿಂಬಾವಳಿ ಮತ್ತು ದೊಡ್ಡಬಳ್ಳಾಪುರದ ಶಾಸಕರ ಪ್ರತಿಭಟನೆಯನ್ನು ‘ಅನುದಾನಕ್ಕಾಗಿ ನಡೆಸುವ ಬ್ಲ್ಯಾಕ್ಮೇಲ್’, ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸದಂತೆ ಎಚ್ಚರಿಸಿದ್ದಾರೆ.


