ಪುಲ್ವಾಮಾ: ಭಾರತೀಯ ಇತಿಹಾಸದ ಕಪ್ಪು ದಿನ ಎಂದೇ ಕರೆಯಲ್ಪಡುವ ಪುಲ್ವಾಮಾ ದಾಳಿ ನಡೆದು ಇಂದು ಏಳು ವರ್ಷಗಳು ಸಂದಿವೆ. ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ವೀರಮರಣ ಅಪ್ಪಿದ್ದರು. ಈ ದುರಂತದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಯೋಧರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದ್ದಾರೆ. ತಮ್ಮ ಪ್ರಾಣತ್ಯಾಗ ಮಾಡಿದ ವೀರ ಸೇನಾನಿಗಳ ದೇಶಭಕ್ತಿ ಮತ್ತು ಸೇವೆ ಸದಾ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಉಳಿಯಲಿದ್ದು, ಅವರ ಧೈರ್ಯವು ನಮಗೆಲ್ಲರಿಗೂ ನಿರಂತರ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ತಮ್ಮ ಎಕ್ಸ್ ಸಂದೇಶದಲ್ಲಿ ಶ್ಲಾಘಿಸಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೂಡ ಪುಲ್ವಾಮಾ ದಾಳಿಯ ವೀರ ಯೋಧರಿಗೆ ತಮ್ಮ ಗೌರವ ನಮನಗಳನ್ನು ಅರ್ಪಿಸಿದ್ದಾರೆ. ತಾಯಿ ಭಾರತಿಯನ್ನು ರಕ್ಷಿಸಲು ಯೋಧರು ಮಾಡಿದ ಮಹಾನ್ ತ್ಯಾಗಕ್ಕೆ ಇಡೀ ದೇಶವೇ ಎಂದಿಗೂ ಚಿರಋಣಿಯಾಗಿರಲಿದೆ ಎಂದು ಅವರು ಸ್ಮರಿಸಿದ್ದಾರೆ. ಇದರೊಂದಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿದಂತೆ ದೇಶದ ಪ್ರಮುಖ ಗಣ್ಯರು ಹುತಾತ್ಮರ ಬಲಿದಾನವನ್ನು ನೆನೆದು ಪುಷ್ಪ ನಮನಗಳನ್ನು ಸಲ್ಲಿಸಿದ್ದಾರೆ.

ದೇಶಾದ್ಯಂತ ಇಂದು ಪ್ರೇಮಿಗಳ ದಿನದ ಸಂಭ್ರಮದ ನಡುವೆಯೂ, ಭಾರತೀಯ ಸೇನೆಯ ಈ ವೀರ ಪುತ್ರರ ತ್ಯಾಗವನ್ನು ಸ್ಮರಿಸುವ ಮೂಲಕ ದೇಶಭಕ್ತಿಯ ಅಲೆ ಎದ್ದಿದೆ. ಏಳು ವರ್ಷಗಳ ಹಿಂದೆ ನಡೆದ ಈ ಘಟನೆಯು ಇಂದಿಗೂ ಭಾರತೀಯರ ಹೃದಯದಲ್ಲಿ ಹಸಿರಾಗಿದ್ದು, ವೀರ ಯೋಧರ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ.


