ನಮಗೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಗ್ರೀನ್ ಕಾರ್ಡ್ ಸಿಕ್ಕಿಲ್ಲ.. ನಾವು ಕಾಂಗ್ರೆಸ್ ಪಕ್ಷದ ಈಗಲೂ ಅನಿವಾಸಿಯರೇ ಆಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಗ್ಯತೆ, ಸಾಮರ್ಥ್ಯ ಇದ್ದರೆ ಸಿಎಂ ಅವರು ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ.. ಸಚಿವ ಸಂಪುಟ ಪುನಾರಚನೆ ಸಿಎಂಗೆ ಬಿಟ್ಟಿದ್ದು. ಎಲ್ಲಾ ಶಾಸಕರಿಗೂ ಮಂತ್ರಿ ಆಗುವ ಆಸೆ ಇರುತ್ತೆ.. ಆದ್ರೆ ಮಂತ್ರಿ ಮಾಡಿ ಅಂತ ನಾನು ಯಾರ ಬಳಿಯೂ ಬೇಡಿಕೊಳ್ಳಲ್ಲ ಎಂದು ಬಿಆರ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಆಳಂದ ಕ್ಷೇತ್ರವನ್ನು ಪ್ರತಿನಿಧಿಸ್ತಿರುವ ಬಿಆರ್ ಪಾಟೀಲ್, ಕರ್ನಾಟಕದ ಶಾಸಕರ ಪೈಕಿ ಅತ್ಯಂತ ಹಿರಿಯ ಮತ್ತು ಅನುಭವಿ ಜನಪ್ರತಿನಿಧಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಕೂಡ ಹೌದು.. ಆದರೆ, ಇಷ್ಟೆಲ್ಲ ಅನುಭವ, ರಾಜಕೀಯ ಹಿರಿತನ ಇದ್ದರೂ ಬಿ ಆರ್ ಪಾಟೀಲ್ ಅವರಿಗೆ ಈವರೆಗೂ ಮಂತ್ರಿಯಾಗುವ ಯೋಗ ಸಿಕ್ಕಿಲ್ಲ.
ಬಿ ಆರ್ ಪಾಟೀಲರಿಗೆ ಮಂತ್ರಿ ಸ್ಥಾನ ಕೊಡಿಸಲು ಸಾಧ್ಯವಾಗದ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಲವು ಬಾರಿ ಬಹಿರಂಗವಾಗಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹೊತ್ತಲ್ಲಿ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂಬ ಸುದ್ದಿ ಹಬ್ಬಿತ್ತು. ಆದರೆ, ಈವರೆಗೂ ಸಂಪುಟ ಪುನಾರಚನೆಯ ಯಾವುದೇ ಮುನ್ಸೂಚನೆ ಸಿಕ್ಕಿಲ್ಲ.
ಖುದ್ದು ಎಐಸಿಸಿ ಅಧ್ಯಕ್ಷ ಖರ್ಗೆಯವರೇ ಪ್ರತಿಕ್ರಿಯೆ ನೀಡುತ್ತಾ, ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಬೆನ್ನಲ್ಲೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಬಿಆರ್ ಪಾಟೀಲ್, ತಮ್ಮ ಮನದ ನೋವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.