ರಾಜ್ಯಸುದ್ದಿ

38 ರ ಮಹಿಳೆಯ ಅಕ್ರಮ ಸಂಬಂಧಕ್ಕೆ ಬೇಸತ್ತು, 19 ವರ್ಷದ ಯುವಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: 38 ವರ್ಷದ ವಿವಾಹವಿಚ್ಛೇದನ ಹೊಂದಿದ ಮಹಿಳೆಯೊಬ್ಬಳೊಂದಿಗಿನ ಅಕ್ರಮ ಸಂಬಂಧ ಮತ್ತು ಲೈಂಗಿಕ ಪ್ರಚೋದನೆಯಿಂದ ಉಂಟಾದ ಕಿರುಕುಳಕ್ಕೆ ಬೇಸತ್ತು, ಯುವಕನೊಬ್ಬನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, 19 ವರ್ಷದ ನಿಖಿಲ್ ಕುಮಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ.

ಶಾರದಾ ಎಂಬುವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಆರೋಪ ಕೇಳಿಬಂದಿದ್ದು, ಮಹಿಳೆಯ ಕಾಟ ತಾಳಲಾರದೆ ಆತ ಸಾವಿಗೆ ಶರಣಾಗಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ. ಶಾರದಾ ಹಲವು ವರ್ಷಗಳ ಹಿಂದೆ ತನ್ನ ಗಂಡನಿಂದ ವಿಚ್ಛೇದನ ಪಡೆದು, ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.

ಪೋಷಕರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಿಖಿಲ್‌ಗೆ ಕೇವಲ 19 ವರ್ಷ ವಯಸ್ಸು, ಆದರೆ ಶಾರದಾ 38 ವರ್ಷದವಳು, ಇವರಿಬ್ಬರ ಈ ವಯೋವ್ಯತ್ಯಾಸ ಮತ್ತು ಇವರ ಸಂಬಂಧವನ್ನು ಪೋಷಕರು ಸಹಿಸಲಿಲ್ಲ. ಆದರೆ ಶಾರದಾ ಯುವಕನನ್ನು ಬಿಡದೇ ಇದ್ದಳು. ಪೋಷಕರ ಕಣ್ಣು ತಪ್ಪಿಸಿ, ನಿಖಿಲ್‌ನ್ನು ಹೊರಗಡೆ ಕರೆದೊಯ್ಯುತ್ತಿದ್ದಳು ಎಂದು ಆರೋಪಿಸಲಾಗಿದೆ. ಇದು ಕೇವಲ ಪ್ರೇಮ ಸಂಬಂಧವಲ್ಲ, ಬಲವಂತದ ಲೈಂಗಿಕ ದಬ್ಬಾಳಿಕೆಯಾಗಿ ಪರಿಣಮಿಸಿತು. ಇದರಿಂದ ನಿಖಿಲ್ ಮಾನಸಿಕವಾಗಿ ಬೇಸತ್ತು, ನಿಖಿಲ್ ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ನಿಖಿಲ್ ಪೋಷಕರು ಈಗ ಶಾರದಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button