‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲ ಭಾಗ 2023ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಸಂಚಲನ ಮತ್ತು ವಿವಾದ ಎಲ್ಲರಿಗೂ ತಿಳಿದೇ ಇದೆ. ಇದೀಗ ಅದರ ಮುಂದುವರಿದ ಭಾಗವಾಗಿ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಮತ್ತೊಮ್ಮೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದ ಟ್ರೇಲರ್ ಆರಂಭದಲ್ಲೇ ಶಾಕಿಂಗ್ ಸಂದೇಶವೊಂದನ್ನು ನೀಡಲಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ಇಸ್ಲಾಮಿಕ್ ಸ್ಟೇಟ್ ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯ ಸಾಲುಗಳೊಂದಿಗೆ ಕಥೆಯ ಗಾಂಭೀರ್ಯವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಈ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹೊತ್ತಿಸಿದೆ.

ಈ ಸಿನಿಮಾದ ಕಥಾಹಂದರವು ಕೇವಲ ಕೇರಳಕ್ಕೆ ಸೀಮಿತವಾಗದೆ ಮಧ್ಯಪ್ರದೇಶ ಮತ್ತು ರಾಜಸ್ತಾನದಂತಹ ರಾಜ್ಯಗಳಲ್ಲಿ ನಡೆಯುವ ಸತ್ಯ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರಮುಖವಾಗಿ ಲವ್ ಜಿಹಾದ್ ಜಾಲಕ್ಕೆ ಸಿಲುಕುವ ಹಿಂದೂ ಯುವತಿಯರ ಜೀವನದ ದುರಂತವನ್ನು ಈ ಬಾರಿ ಹೆಚ್ಚು ತೀವ್ರವಾಗಿ ಚಿತ್ರಿಸಲಾಗಿದೆ. ಅದಿತಿ ಭಾಟಿಯಾ, ಐಶ್ವರ್ಯಾ ಊಜಾ ಮತ್ತು ಉಲ್ಕಾ ಗುಪ್ತಾ ಅವರು ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕಿ ಹೇಗೆ ಮತಾಂತರಗೊಳ್ಳುತ್ತಾರೆ ಮತ್ತು ಆ ನಂತರ ಅವರ ಜೀವನವು ಎಷ್ಟು ಹೀನಾಯ ಸ್ಥಿತಿಗೆ ತಲುಪುತ್ತದೆ ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಮತಾಂತರದ ಹಿಂದಿರುವ ಕಾಣದ ಕೈಗಳು ಮತ್ತು ಯುವತಿಯರನ್ನು ಬ್ರೈನ್ ವಾಶ್ ಮಾಡುವ ವಿಧಾನಗಳನ್ನು ನೋಡಿದ ಪ್ರೇಕ್ಷಕರು ಅಕ್ಷರಶಃ ಹೌಹಾರಿದ್ದಾರೆ.

ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಸಿನಿಮಾವು ಕೇವಲ ಮನರಂಜನೆಯ ಉದ್ದೇಶ ಹೊಂದಿಲ್ಲದೆ, ಸಮಾಜಕ್ಕೆ ಒಂದು ಕಠೋರ ಎಚ್ಚರಿಕೆ ನೀಡುವ ಉದ್ದೇಶ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲ ಭಾಗವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದರೂ, ಒಂದು ವರ್ಗದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಸೀಕ್ವೆಲ್ನ ಟ್ರೇಲರ್ನಲ್ಲಿನ ದೃಶ್ಯಗಳು ಮತ್ತು ಸಂಭಾಷಣೆಗಳು ಸದ್ಯದ ಪರಿಸ್ಥಿತಿಯಲ್ಲಿ ಮತ್ತಷ್ಟು ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣಗಳಿವೆ. ಫೆಬ್ರವರಿ 27ರಂದು ಈ ಸಿನಿಮಾ ಬೆಳ್ಳಿತೆರೆಗೆ ಬರಲಿದ್ದು, ಮೊದಲ ಭಾಗದಂತೆಯೇ ಇದು ದಾಖಲೆ ಬರೆಯಲಿದೆಯೇ ಅಥವಾ ನಿಷೇಧದ ಭೀತಿ ಎದುರಿಸಲಿದೆಯೇ ಎಂಬ ಕುತೂಹಲ ಸದ್ಯ ಎಲ್ಲೆಡೆ ಮನೆಮಾಡಿದೆ.


