ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭ್ರಷ್ಟಾಚಾರದ ಗಂಭೀರ ಆರೋಪಕ್ಕೆ ಗುರಿಯಾಗಿದ್ದು, ಮುಡಾ ಹಗರಣದ ಆರೋಪಿ ಮಾಜಿ ಆಯುಕ್ತ ನಟೇಶ್ ಅವರಿಂದ ಲಂಚ ಪಡೆದು ಬಡ್ತಿ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗೆ ಲಿಖಿತ ದೂರು ನೀಡಿದ್ದು, ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಗೆ ಸೇರಿದ ಕಾರಿನಲ್ಲಿ ಐದು ಬ್ಯಾಗ್ಗಳಲ್ಲಿ ಲಂಚದ ಹಣವನ್ನು ಶಾಲಿನಿ ರಜನೀಶ್ ಅವರ ಆಪ್ತರಿಗೆ ತಲುಪಿಸಲಾಗಿದೆ ಎಂದು ದೂರಿದ್ದಾರೆ. ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣದಲ್ಲಿ ಈಗಾಗಲೇ ಕಾನೂನು ಹೋರಾಟ ನಡೆಸುತ್ತಿರುವ ಕೃಷ್ಣ ಅವರು, ಆರೋಪಿ ನಟೇಶ್ ಕೆಲಸ ಮಾಡುತ್ತಿರುವ ಸಂಸ್ಥೆಯ ವಾಹನದಲ್ಲೇ ಹಣ ಸಾಗಾಟವಾಗಿದೆ ಎಂದು ಕಾರ್ ನಂಬರ್ ಸಮೇತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಿಖಿಲ್, ಜಸ್ವಂತ್, ನಟೇಶ್ ಮತ್ತು ಶಾಲಿನಿ ರಜನೀಶ್ ಅವರ ಫೋನ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದರೆ ಲಂಚದ ವ್ಯವಹಾರದ ಸತ್ಯಾಸತ್ಯತೆ ಹೊರಬರಲಿದೆ ಎಂದು ತನಿಖಾ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಮುಡಾ ಹಗರಣದ ಬೆನ್ನಲ್ಲೇ ಉನ್ನತ ಮಟ್ಟದ ಅಧಿಕಾರಿಯ ವಿರುದ್ಧ ಈ ಪ್ರಮಾಣದ ದಾಖಲೆಗಳೊಂದಿಗೆ ದೂರು ಸಲ್ಲಿಕೆಯಾಗಿರುವುದು ರಾಜ್ಯ ರಾಜಕಾರಣ ಮತ್ತು ಆಡಳಿತ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.


