ಗದಗ : ಬೀದಿ ದೀಪ ಅಕ್ರಮದ ಬಗ್ಗೆ ಈಗಾಗಲೇ ಡಿಸಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಬಿಜೆಪಿ ನಗರಸಭೆಯಲ್ಲಿ ಜನ ವಿರೋಧಿ ಆಡಳಿತ ನಡೆಸುತ್ತಿದ್ದು, ಮೂಲಭೂತ ಸೌಲಭ್ಯ ನೀಡುವಲ್ಲಿ ವಿಫಲವಾಗಿದೆ. ನಗರಸಭೆ ಆಡಳಿತ ನಿರ್ಣಾಮವಾಗಿದೆ. ನಗರಸಭೆಯಲ್ಲಿ 15ದಿನದಿಂದ ಕಮಿಷನರ್ ಇಲ್ಲ. ಇದರಿಂದ ಆಡಳಿತ ಸಂಪೂರ್ಣ ವಿಫಲವಾಗಿದ್ದು, ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ಮಹೇಶ್ ದಾಸರ್ ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಎಲ್ ಡಿ ಚಂದಾವರಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರಸಭೆ ಕಂಗಾಲಾಗಿದ್ದು, ಧರ್ಮಶಾಲೆಗಿಂತ ಕಡೆಯಾಗಿ ಆಡಳಿತದ ವ್ಯವಸ್ಥೆ ಇದೆ. ಗದಗ-ಬೆಟಗೇರಿ ನಗರಸಭೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ, ಆಡಳಿತ ಪಕ್ಷ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ಅನೇಕ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ದುರಸ್ಥಿ ಹೀಗೆ ಹಲವಾರು ಮೂಲಭೂತ ಸೌಕರ್ಯದಿಂದ ನಗರ ವಂಚಿತವಾಗಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಸರಬರಾಜು ಜವಾಬ್ದಾರಿಯನ್ನು ನಗರಸಭೆ ವಹಿಸಿಕೊಂಡ ನಂತರ ಕುಡಿಯುವ ನೀರಿನ ಸಮಸ್ಯೆ ಮತ್ತೆ ಉಲ್ಬಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರಿಗೆ ಕೇಲಸ ಮಾಡಲು ಆಸಕ್ತಿ ಇಲ್ಲ. ನಿವು ಅಧಿಕಾರದಿಂದ ಕೆಳಗಿಳಿದರೇ ಬೇರೆಯವರು ಆಡಳಿತ ನಡೆಸುತ್ತಾರೆ. ಬಿಜೆಪಿ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಾ ಬಂದರೂ ಅವರ ಸಾಧನೆ ಶೂನ್ಯ. ನಗರಸಭೆ ಆಡಳಿತ ಪದ್ದತಿ ಹೀಗೆ ಮುಂದುವರಿದರೇ ಮುಂದಿನ ದಿನಮಾನಗಳಲ್ಲಿ ಅಧಿಕಾರದಿಂದ ಕೆಳಗಿಳಿಯುವವರೆಗೂ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಜನರಿಗೆ ಯಾವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಿರಿ ಅದನ್ನು ಮರೆತು ಅಧಿಕಾರ ನಡೆಸುತ್ತಿರುವುದು ದುರಂತದ ಸಂಗತಿ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಸರ್ಕಾರಕ್ಕೆ ತಿಳಿಸಬೇಕು. ಇದಕ್ಕೆ ಒಂದು ವಾರ ಕಾಲಾವಕಾಶ ನೀಡುತ್ತಿದ್ದೇವೆ ಎಂದರು.