ವಿಜಯನಗರ: ಪ್ರಸಿದ್ಧ ಹಂಪಿ ಉತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಿದ ಅನಿರೀಕ್ಷಿತ ಉಡುಗೊರೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ನಡೆಯುತ್ತಿದ್ದ ಹೆಲಿಕಾಪ್ಟರ್ ರೈಡ್ ವೀಕ್ಷಿಸಲು ಬಂದಿದ್ದ ಪುಟಾಣಿಗಳಿಗೆ ಆಕಾಶದಲ್ಲಿ ಹಾರಾಡುವ ಸುವರ್ಣ ಅವಕಾಶವನ್ನು ಸಚಿವರು ಕಲ್ಪಿಸಿಕೊಟ್ಟಿದ್ದಾರೆ.

ದೂರದಿಂದಲೇ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಮಕ್ಕಳ ಬಳಿ ತೆರಳಿದ ಸಚಿವರು, ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಹೆಲಿಕಾಪ್ಟರ್ ಏರುವ ಆಸೆ ಇದೆಯೇ ಎಂದು ವಿಚಾರಿಸಿದರು. ಮಕ್ಕಳ ಉತ್ಸಾಹಭರಿತ ಉತ್ತರವನ್ನು ಕೇಳಿದ ತಕ್ಷಣ, ಸಚಿವರು ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಆಕಾಶಯಾನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೀವನದಲ್ಲಿ ಎಂದಾದರೂ ವಿಮಾನ ಅಥವಾ ಹೆಲಿಕಾಪ್ಟರ್ ಹತ್ತಬೇಕು ಎಂಬ ಕನಸು ಕಂಡಿದ್ದ ಬಡ ಕುಟುಂಬದ ಈ ಮಕ್ಕಳಿಗೆ ಸಚಿವರ ಈ ನಡೆ ದೊಡ್ಡ ಸರ್ಪ್ರೈಸ್ ಆಗಿ ಪರಿಣಮಿಸಿತು. ಹೆಲಿಕಾಪ್ಟರ್ ಏರಿ ಮುಗಿಲತ್ತ ಹಾರಿದ ಮಕ್ಕಳು ಹಂಪಿ ಉತ್ಸವದ ಸಂಭ್ರಮದ ನಡುವೆ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದರು. ಸಚಿವರ ಈ ಔದಾರ್ಯ ಮತ್ತು ಮಕ್ಕಳ ಮುಖದಲ್ಲಿ ಮೂಡಿದ ಮಂದಹಾಸ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆಯಿತು.


