ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜ್ವಾಲೆ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿರುವ ಈ ಹೊತ್ತಿನಲ್ಲಿ, ಈ ಮಹಾ ಸಂಘರ್ಷದ ಹಿಂದೆ ಗ್ರಹಗತಿಗಳ ಆಟವಿದೆಯೇ ಎಂಬ ಚರ್ಚೆ ಜ್ಯೋತಿಷ್ಯ ಶಾಸ್ತ್ರ ವಲಯದಲ್ಲಿ ತೀವ್ರವಾಗಿದೆ. ಮಾರ್ಚ್ ತಿಂಗಳಲ್ಲಿ ಸಂಭವಿಸಲಿರುವ ಖಗೋಳ ವಿದ್ಯಮಾನಗಳು ಜಗತ್ತಿಗೆ ಭೀಕರ ಗಂಡಾಂತರ ತರಲಿವೆಯೇ ಎಂಬ ಆತಂಕ ಮನೆಮಾಡಿದೆ.
ಜ್ಯೋತಿಷ್ಯದ ವಿಶ್ಲೇಷಣೆಯ ಪ್ರಕಾರ, ಫೆಬ್ರವರಿ 20ರಿಂದ ಶನಿ ಮತ್ತು ನೆಪ್ಚೂನ್ ಗ್ರಹಗಳು ಅಗ್ನಿತತ್ವದ ಮೇಷ ರಾಶಿಯನ್ನು ಪ್ರವೇಶಿಸಿವೆ. ಮೇಷ ರಾಶಿಗೆ ಯುದ್ಧದ ಅಧಿಪತಿ ಮಂಗಳನ ಆಧಿಪತ್ಯ ಇರುವುದರಿಂದ, ಈ ಸಂಯೋಜನೆಯು ದೇಶಗಳ ನಡುವೆ ಆಕ್ರೋಶ ಮತ್ತು ಸಶಸ್ತ್ರ ಸಂಘರ್ಷವನ್ನು ಪ್ರಚೋದಿಸುತ್ತಿದೆ. ಇದರ ಜೊತೆಗೆ ಕುಂಭ ರಾಶಿಯಲ್ಲಿ ಮಂಗಳ ಮತ್ತು ರಾಹುವಿನ ಸಂಯೋಜನೆಯು ಅನಿರೀಕ್ಷಿತ ಕ್ಷಿಪಣಿ ದಾಳಿ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಡುತ್ತಿದ್ದಾರೆ. ಫೆಬ್ರವರಿ 17ರ ಸೂರ್ಯಗ್ರಹಣವು ಯುರೇನಸ್ ಪ್ರಭಾವಕ್ಕೆ ಒಳಗಾಗಿದ್ದರಿಂದಲೇ ಇಷ್ಟೊಂದು ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿವೆ ಎನ್ನಲಾಗುತ್ತಿದೆ.
ಮಾರ್ಚ್ 3ರಂದು ಸಂಭವಿಸಲಿರುವ ಚಂದ್ರಗ್ರಹಣವು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಮಯದಲ್ಲಿ ಕೇತು ಗ್ರಹದ ಪ್ರಭಾವ ಅತಿಯಾಗಿರುವುದರಿಂದ, ಜಗತ್ತಿನಾದ್ಯಂತ ಹಲವು ನೈಸರ್ಗಿಕ ವಿಕೋಪಗಳು ಮತ್ತು ವಿಧ್ವಂಸಕ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಶನಿ ಮತ್ತು ನೆಪ್ಚೂನ್ ಸಂಯೋಜನೆಯು ದೊಡ್ಡ ಮಟ್ಟದ ಸಾವು-ನೋವುಗಳಿಗೆ ಸಾಕ್ಷಿಯಾಗುವ ಮುನ್ಸೂಚನೆ ನೀಡುತ್ತಿದೆ. ವಿಶೇಷವಾಗಿ ಮಾರ್ಚ್ 5ರಿಂದ 11ರವರೆಗೆ ಮಂಗಳ ಮತ್ತು ಯುರೇನಸ್ ಗ್ರಹಗಳ ನಡುವೆ ಏರ್ಪಡಲಿರುವ ‘ಸ್ಕ್ವೇರ್’ ಸ್ಥಿತಿಯು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸುವುದಲ್ಲದೆ, ಪ್ರಕೃತಿ ವಿಕೋಪಗಳಿಗೂ ದಾರಿಯಾಗಲಿದೆ.
ಮಾರ್ಚ್ 13 ಮತ್ತು 14ರಂದು ಮಂಗಳವು ರಾಹುವಿನೊಂದಿಗೆ ಸಂಯೋಜನೆಗೊಳ್ಳುತ್ತಿರುವುದು ಯುದ್ಧವು ಇನ್ನಷ್ಟು ಉಲ್ಬಣಗೊಳ್ಳುವ ಲಕ್ಷಣಗಳನ್ನು ತೋರುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ಮೇಷ ರಾಶಿಯಲ್ಲಿ ಗ್ರಹಗಳ ಸಮೂಹ ನಿರ್ಮಾಣವಾಗುತ್ತಿರುವುದು ಜಾಗತಿಕ ಸಮರದ ಭೀತಿಯನ್ನು ದಟ್ಟವಾಗಿಸಿದೆ.


