ಚಿಕ್ಕಮಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜೊತೆಗೆ ಕೇಸರಿ ಶಾಲು ಧರಿಸಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಶಾಸಕಿ ನಯನಾ ಮೋಟಮ್ಮ ಕುತೂಹಲ ಮೂಡಿಸಿದ್ದಾರೆ.
ಮೂಡಿಗೆರೆಯಲ್ಲಿ ಹಿಂದೂ ಮಹಾಗಣಪತಿ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ನಾನು ಹಿಂದೂವಾಗಿ, ದಲಿತ ಮಹಿಳೆಯಾಗಿ ಮೂಡಿಗೆರೆಯಲ್ಲಿ ಜನಿಸಿದ್ದೇನೆ. ನಾನು ಮುಂದೆ ಬಿಜೆಪಿಗೆ ಹೋಗುತ್ತೇನೋ, ಬಿಎಸ್ಪಿ, ಎಸ್ಡಿಪಿಐ ಹೋಗುತ್ತೇನೋ ಎಂಬ ಪ್ರಶ್ನೆಗೆ ಇನ್ನೂ ಮೂರು ವರ್ಷ ಕಾಯಬೇಕು ಎಂದು ಹೇಳಿದ್ದಾರೆ.
ಇಂದು ನಾನು ಕೇಸರಿ ಶಾಲು ಹಾಕಿ ಬಂದಿರುವುದಕ್ಕೆ ನಿಮಗೆಲ್ಲಾ ಪ್ರಶ್ನೆ ಮೂಡಿರಬಹುದು. ಹಾಗಾಗಿ ನಾನು ಸ್ಪಷ್ಟನೆ ನೀಡಿದ್ದೇನೆ ಎಂದ್ರು. ನಾನು ಗಣಪತಿಗಾಗಿ ಬಂದಿದ್ದೇನೆ. ಶಾಸಕಿಯಾಗಿ ಪಕ್ಷ ಪ್ರತಿನಿಧಿಸುವುದು ಆ ಮೇಲೆ ಈಗ ಗಣಪತಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಯಾವ ಪಕ್ಷದವರಿಗೂ ಪ್ರಶ್ನೆಗಳು ಉಳಿಯಬಾರದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕಿಯಾಗಿಯೂ ನಿಂತಿದ್ದೇನೆ. ಅದರ ಜೊತೆಗೆ ಸಾಕಷ್ಟು ಅಸ್ತಿತ್ವಗಳು ಇವೆ. ಅದನ್ನೆಲ್ಲಾ ಸೇರಿಸಿಕೊಂಡು ನಯನಾ ಮೋಟಮ್ಮ ಆಗಿದ್ದೇನೆ ಎಂದಿದ್ದಾರೆ.


