ಬೆಂಗಳೂರು : ಬೇರೆಯವರು ನಮ್ಮ ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ “ಮಂತ್ರಾಕ್ಷತೆ” ಮಾಡಿ ಹಂಚುತ್ತಿದ್ದಾರೆ. ಆದರೆ ಜನರ ಹಸಿವಿಗೆ “ಅನ್ನಭಾಗ್ಯ”ವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ “ಯುವನಿಧಿ”ಯೇ ಮಂತ್ರಾಕ್ಷತೆ, ಮಹಿಳೆಯರ ಕಷ್ಟಕ್ಕೆ “ಗೃಹಲಕ್ಷ್ಮಿ”ಯೇ ಮಂತ್ರಾಕ್ಷತೆ, ಮಹಿಳೆಯರ ಪ್ರಯಾಣಕ್ಕೆ “ಶಕ್ತಿ”ಯೇ ಮಂತ್ರಾಕ್ಷತೆ, ಮನೆಯ ಬೆಳಕಿಗೆ “ಗೃಹಜ್ಯೋತಿ”ಯೇ ಮಂತ್ರಾಕ್ಷತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.

ಇಂದಿನ ಬಿಜೆಪಿ ಪ್ರತಿಭಟನೆಗೆ ಡಿ.ಕೆ. ಶಿವಕುಮಾರ್ ಗ್ಯಾರಂಟಿಗಳ ಮೂಲಕ ಟಾಂಗ್ ನೀಡಿದ್ದಾರೆ. ಅಯೋಧ್ಯೆಯಲ್ಲಿ ಇದೇ 22 ರಂದು ರಾಮಮಂದಿರ ಉದ್ಘಾಟನೆಗೂ ಮುನ್ನ ಮನೆಮನೆಗೆ ಮಂತ್ರಾಕ್ಷತೆ ನೀಡಿ ಅದೇ ದಿನ ಮನೆಯಲ್ಲಿ ಮನೆಯಲ್ಲಿ ನಂದಾದೀಪಾ ಹಚ್ಚಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದು, ಇದರ ಹಿನ್ನಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಮನೆಮನೆಗೆ ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಇದೇ ವಿಚಾರಕ್ಕೆ ಮಾತನಾಡಿದ ಡಿ.ಕೆ.ಶಿವಕುಮಾರ್ ನಮ್ಮ ಗ್ಯಾರಂಟಿಗಳೇ ನಮ್ಮ ಮಂತ್ರಾಕ್ಷತೆ ನಾವು ನಮ್ಮ ಗ್ಯಾರಂಟಿಗಳನ್ನ ಮನೆಮನೆಗೆ ತಲುಪಿಸಿದ್ದೇವೆ ಅದೇ ನಮ್ಮ ಮಂತ್ರಾಕ್ಷತೆ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಕರಸೇವಕನ ಬಂಧನಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಇಂದು ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯರನ್ನ ನೇರವಾಗಿ ಗುರಿಯಾಗಿಸಿಕೊಂಡು ನಗರದ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿಯ ಪ್ರಮುಖರೆಲ್ಲರೂ ಪ್ರತಿಭಟನೆ ಮಾಡಿದರು. ಹಿಂದೂ ವಿರೋಧಿ ಧೋರಣೆಗೆ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿತ್ತು. ಭಾಷಣದಲ್ಲಿ ಪ್ರತಿಯೊಬ್ಬರು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ ಹುಬ್ಬಳ್ಳಿಯಲ್ಲಿ ಬಂಧಿಸಿರೋ ಕರಸೇವಕ ಶ್ರೀಕಾಂತ್ನನ್ನು 48 ಗಂಟೆಗಳೊಳಗೆ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು..