ರಾಜ್ಯದ ಪುರುಷ ಪ್ರಯಾಣಿಕರಿಗೆ ಸಾರಿಗೆ ಇಲಾಖೆಯು ತಾತ್ಕಾಲಿಕ ರಿಲೀಫ್ ನೀಡಿದ್ದು, ಸದ್ಯಕ್ಕೆ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಈಗ ದರ ಏರಿಕೆ ಮಾಡುವ ಪ್ರಶ್ನೆಯೇ ಇಲ್ಲ, ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು, ಕಳೆದ ವರ್ಷದ ಜನವರಿಯಲ್ಲಿ ಶೇಕಡಾ 15ರಷ್ಟು ದರ ಹೆಚ್ಚಳ ಮಾಡಲಾಗಿತ್ತು, ಅಂದಿನಿಂದ ಪ್ರತಿವರ್ಷ ದರ ಪರಿಷ್ಕರಣೆ ಮಾಡುವ ಕುರಿತು ಇಲಾಖೆಯ ಒಳಗಡೆ ಚರ್ಚೆಗಳು ನಡೆಯುತ್ತಿದ್ದವು.ಜಲಮಂಡಳಿ ಮತ್ತು ವಿದ್ಯುತ್ ದರದ ಮಾದರಿಯಲ್ಲಿಯೇ ಸಾರಿಗೆ ಸಂಸ್ಥೆಗಳಲ್ಲೂ ದರ ನಿಗದಿ ಮಾಡಲು ಸಮಿತಿ ರಚನೆಯ ಪ್ರಸ್ತಾಪ ಸರ್ಕಾರದ ಮುಂದಿತ್ತು. ಸಮಿತಿಯ ಶಿಫಾರಸಿನ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಲು ಯೋಜಿಸಲಾಗಿದ್ದರೂ, ಇನ್ನೂ ಸಮಿತಿ ರಚನೆಯಾಗದ ಕಾರಣ ದರ ಏರಿಕೆ ಪ್ರಕ್ರಿಯೆ ವಿಳಂಬವಾಗಿದೆ. ಈ ತಾಂತ್ರಿಕ ಕಾರಣದಿಂದಾಗಿ ಕನಿಷ್ಠ ಮುಂದಿನ ಆರು ತಿಂಗಳುಗಳ ಕಾಲ ಬಸ್ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ನಿರ್ಧಾರವು ಶಕ್ತಿ ಯೋಜನೆಯ ಲಾಭ ಪಡೆಯದ ಪುರುಷ ಪ್ರಯಾಣಿಕರಿಗೆ ಹಾಗೂ ದೈನಂದಿನ ಪ್ರಯಾಣಿಕರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ ಎಂದಿದ್ದಾರೆ.


