ಚಿಕ್ಕಮಗಳೂರು: ನಕಲಿ ಟಿಕೆಟ್ ಸೃಷ್ಟಿಸಿ ಟ್ರಕ್ಕಿಂಗ್ ಗೆ ಅವಕಾಶ ನೀಡಿದ ಆರೋಪದ ಮೇಲೆ ಕೊಪ್ಪ ಅರಣ್ಯ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯಾಧಿಕಾರಿ ಚಂದನಗೌಡ ದ್ಯಾಮನಗೌಡ್ರ ಅವರನ್ನು ಅಮಾನತು ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಮೂಡಿಗೆರೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ತಾಣದವಾದ ರಾಣಿಝರಿ ಯಿಂದ ಐತಿಹಾಸಿಕ ಬಲ್ಲಾಳರಾಯ ಕೋಟೆ ಮತ್ತು ಬಂಡಾಜೆ ಜಲಪಾತ ವೀಕ್ಷಣೆಗೆ ಚಾರಣ ತೆರಳಲು ಆನ್ಲೈನ್ ಮೂಲಕ 250 ರೂ. ಪಾವತಿಸಿ ಟಿಕೆಟ್ ಕಾಯ್ದಿರಿಸಲು ಅವಕಾಶ ಇದೆ ಇದನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ.
ಆದರೆ ಆನ್ಲೈನ್ ಟಿಕೆಟ್ ಮಾದರಿಯಲ್ಲೇ ನಕಲಿ ಟಿಕೆಟ್ ಮುದ್ರಿಸಿ ಚಾರಣಿಗರಿಗೆ ನೀಡಿ ಅವರಿಂದ ಹಣವನ್ನು ಮೋನಿಕಾ ಎಂಬ ಹೆಸರಿನ ಫೋನ್ ಪೇ ಖಾತೆಗೆ ವರ್ಗಾವಣೆ ಮಾಡಿಸಿದ್ದಾರೆ ಎಂಬುದು ಚಂದನಗೌಡ ಮೇಲಿರುವ ಆರೋಪ. 2024ರ ಜೂನ್ ತಿಂಗಳಲ್ಲಿ ಆನ್ಲೈನ್ ಬುಕ್ಕಿಂಗ್ ಮಾಡಿರುವ ಪಟ್ಟಿಗೂ, ಚಾರಣದ ನೋಂದಣಿ ಪುಸ್ತಕದಲ್ಲಿರುವ ಪಟ್ಟಿಗೂ ಹೊಂದಾಣಿಕೆಯಾಗುತ್ತಿಲ್ಲ. ಒಂದು ಬುಕ್ಕಿಂಗ್ ಐಡಿಯನ್ನು ನಕಲು ಮಾಡಿ 10ಕ್ಕೂ ಹೆಚ್ಚು ನಕಲಿ ಟಿಕೆಟ್ ಮುದ್ರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಚಂದನಗೌಡ ದ್ಯಾಮನಗೌಡ್ರ ಅವರನ್ನು ಅಮಾನತುಗೊಳಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಆದೇಶ ಹೊರಡಿಸಿದ್ದಾರೆ.