ಬೀದರ್: ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಅತ್ತೆಯು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದಳೆಂಬ ಆರೋಪದ ಹಿನ್ನೆಲೆಯಲ್ಲಿ, 22 ವರ್ಷದ ಅಂಜನಾಬಾಯಿ ಶೇಖರ್ ಪಾಟೀಲ್ ಎಂಬ ಯುವತಿ ತನ್ನ 11 ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
2022ರಲ್ಲಿ ಶೇಖರ್ ಪಾಟೀಲ್ ಎಂಬುವವರನ್ನು ಮದುವೆಯಾಗಿದ್ದ ಅಂಜನಾಬಾಯಿಗೆ ಆರಂಭದಿಂದಲೂ ಪತಿ ಮನೆಯವರಿಂದ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.ಪತಿ ಶೇಖರ್ ಪಾನಿಪುರಿ ವ್ಯಾಪಾರ ಮಾಡುತ್ತಿದ್ದು, ತಡರಾತ್ರಿ ಮನೆಗೆ ಬರುತ್ತಿದ್ದ ವಿಚಾರವಾಗಿ ಅಂಜನಾಬಾಯಿ ಪ್ರಶ್ನಿಸುತ್ತಿದ್ದರು. ಇದೇ ಕಾರಣಕ್ಕೆ ಅತ್ತೆ-ಮಾವ ನಿತ್ಯ ಜಗಳ ತೆಗೆದು, “ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ” ಎಂದು ಹೀಯಾಳಿಸುತ್ತಿದ್ದರು. ಇದರ ಜೊತೆಗೆ ವೇಶ್ಯಾವಾಟಿಕೆ ಮಾಡುವಂತೆ ಆಕೆಯನ್ನು ಪೀಡಿಸುತ್ತಿದ್ದರು ಎಂಬ ದೂರು ಕೇಳಿಬಂದಿದೆ.

ಈ ಬಗ್ಗೆ ಪೋಷಕರಿಗೆ ಅಂಜನಾಬಾಯಿ ತಿಳಿಸಿದ್ದರಾದರೂ, ಸಂಸಾರ ಸರಿಹೋಗಬಹುದು ಎಂಬ ಭರವಸೆಯಲ್ಲಿದ್ದ ಅವರು ಸಮಾಧಾನ ಪಡಿಸಿದ್ದರು. ಆದರೆ ಕಿರುಕುಳ ಅತಿಯಾದಾಗ ಮನನೊಂದ ಯುವತಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಮೃತಳ ತಂದೆ ವಿಜಯಕುಮಾರ್ ನೀಡಿದ ದೂರಿನನ್ವಯ ಪತಿ ಶೇಖರ್ ಸೇರಿದಂತೆ ಮೂವರ ವಿರುದ್ಧ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.


