ಬಾಲಿವುಡ್ನ ಮೋಸ್ಟ್ ಅವೈಟೆಡ್ ಸಿನಿಮಾ ‘ಡಾನ್ 3’ ಘೋಷಣೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಲೇ ಇದೆ. ಈ ಬಾರಿ ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ನಾಯಕ ನಟ ರಣವೀರ್ ಸಿಂಗ್ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ಚಿತ್ರದ ಭವಿಷ್ಯವೇ ಅತಂತ್ರವಾಗಿದೆ. ರಣವೀರ್ ಸಿಂಗ್ ಅವರು ಚಿತ್ರದ ಸ್ಕ್ರಿಪ್ಟ್ ಮತ್ತು ತಮಗೆ ನೀಡಲಾಗುತ್ತಿರುವ ಸಂಭಾವನೆಯ ವಿಚಾರದಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದು, ಈ ಗೊಂದಲದಿಂದಾಗಿ ಶೂಟಿಂಗ್ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಬಾಲಿವುಡ್ನ ಹಿರಿಯ ನಟ ಆಮಿರ್ ಖಾನ್ ಈಗ ಸಂಧಾನಕಾರನಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರರಂಗದ ಹಿತದೃಷ್ಟಿಯಿಂದ ಹಾಗೂ ಬಾಲಿವುಡ್ ವ್ಯವಹಾರಕ್ಕೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಆಮಿರ್ ಖಾನ್ ಅವರು ತಮ್ಮ ನಿವಾಸದಲ್ಲೇ ರಣವೀರ್ ಹಾಗೂ ಫರ್ಹಾನ್ ನಡುವೆ ಸಂಧಾನ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ‘ಡಾನ್ 3’ ಸಿನಿಮಾ ಸೆಟ್ಟೇರಿದರೆ ಚಿತ್ರರಂಗದ ಹಲವರಿಗೆ ಕೆಲಸ ಸಿಗುತ್ತದೆ ಎಂಬುದು ಆಮಿರ್ ಅವರ ಆಶಯವಾಗಿದೆ.
ಮತ್ತೊಂದೆಡೆ, ಚಿತ್ರತಂಡ ಈಗಾಗಲೇ ಸ್ಕ್ರಿಪ್ಟ್ ಕೆಲಸ ಹಾಗೂ ಟೀಸರ್ ಚಿತ್ರೀಕರಣಕ್ಕಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದೆ. ಈಗ ರಣವೀರ್ ಸಿಂಗ್ ಸಿನಿಮಾದಿಂದ ಹೊರನಡೆದರೆ ಸುಮಾರು 40 ಕೋಟಿ ರೂಪಾಯಿ ನಷ್ಟವಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಫರ್ಹಾನ್ ಅಖ್ತರ್ ಅವರು ರಣವೀರ್ ಬಳಿ ದೊಡ್ಡ ಮೊತ್ತದ ಪರಿಹಾರದ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದೇ ವೇಳೆ, ಈ ಪಾತ್ರಕ್ಕೆ ಹೃತಿಕ್ ರೋಶನ್ ಅವರನ್ನು ತರಲು ಫರ್ಹಾನ್ ಪ್ರಯತ್ನಿಸುತ್ತಿದ್ದಾರೆ ಎಂಬುದು ರಣವೀರ್ ಅವರ ಆರೋಪವಾಗಿದೆ.

ಈ ಎಲ್ಲಾ ಗೊಂದಲಗಳ ನಡುವೆ ಶಾರುಖ್ ಖಾನ್ ಅಭಿಮಾನಿಗಳು ಮಾತ್ರ ಸದ್ದಿಲ್ಲದೆ ಸಂಭ್ರಮಿಸುತ್ತಿದ್ದಾರೆ. ‘ಡಾನ್’ ಸರಣಿಯ ಮೊದಲ ಎರಡು ಚಿತ್ರಗಳಲ್ಲಿ ಕಿಂಗ್ ಖಾನ್ ನಟಿಸಿದ್ದರು. ಮೂರನೇ ಭಾಗದಲ್ಲಿ ಅವರು ಇಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಈಗ ರಣವೀರ್ ಮತ್ತು ಫರ್ಹಾನ್ ನಡುವಿನ ಕಿತ್ತಾಟದಿಂದಾಗಿ, ಮತ್ತೆ ಶಾರುಖ್ ಖಾನ್ ಅವರೇ ‘ಡಾನ್’ ಆಗಿ ಬರಬಹುದು ಎಂಬ ಸಣ್ಣ ಆಸೆ ಅಭಿಮಾನಿಗಳಲ್ಲಿ ಚಿಗುರೊಡೆದಿದೆ.


