
ವಿಜಯಪುರ: ಟ್ರ್ಯಾಕ್ಟರ್ ಜಗ್ಗುವ ಸ್ಫರ್ಧೆ ವೇಳೆ ಅಂಬೇಡ್ಕರ್ ಭವನದ ಮೇಲ್ಛಾವಣಿ ಕುಸಿದು ಬಿದ್ದು 5 ಮಂದಿ ಯುವಕರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ನಂದಿ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.
ಸಿದ್ದು ವಸಂತ ರಾಠೋಡ, ಅಲಿ ಹಾಜೀಸಾಬ ಮುಲ್ಲಾ, ಕಿರಣ ಲಕ್ಷ್ಮಣ ರಾಠೋಡ, ಅಶೋಕ ನಿಂಗಪ್ಪ ಮಾದರ, ಆಶೀಪ್ ಬಾಗವಾನ ಗಾಯಗೊಂಡ ಯುವಕರಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗೆಳೆಯರ ಬಳಗದಿಂದ ಶ್ರೀ ಬಸವೇಶ್ವರ ಜಾತ್ರೆ ನಿಮಿತ್ತ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆಯದೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ವಿಜಯಪುರ-ಬಾಗಲಕೋಟ ಸೇರಿದಂತೆ ವಿವಿಧ ಭಾಗದಿಂದ ಸ್ಪರ್ಧೆ ವೀಕ್ಷಿಸಲು ಸಾವಿರಾರು ಜನರುನ ಆಗಮಿಸಿದ್ದರು.
ಈ ವೇಳೆ ಅವಘಡ ಸಂಭವಿಸಿದ್ದು, ಕಾರ್ಯಕ್ರಮ ಆಯೋಜಕರು ಪರಾರಿಯಾಗಿದ್ದಾರೆ. ಇನ್ನು ಘಟನೆ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




