ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಶಕ್ತಿಪೀಠ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿರುವುದು ಈಗ ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ಈ ತಾಂತ್ರಿಕ ಕ್ಷೇತ್ರವು 51 ಶಕ್ತಿಪೀಠಗಳಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ನಂಬಲಾಗಿದ್ದು, ಕೇಳಿದ್ದನ್ನು ನೀಡುವ ದೇವಿ ಎಂದೇ ಪ್ರಸಿದ್ಧಿ ಪಡೆದಿದೆ.

ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಲವು ಹೋಮ-ಹವನ ಹಾಗೂ ಜ್ಯೋತಿಷಿಗಳ ಮೊರೆ ಹೋಗಿದ್ದು, ಶಿವರಾತ್ರಿಯ ನಂತರವೂ ಅಧಿಕಾರ ಹಸ್ತಾಂತರದ ಸುಳಿವು ಕಾಣದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಮತ್ತೊಂದೆಡೆ, ರಾಷ್ಟ್ರ ರಾಜಕಾರಣದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಕೂಗು ಪಕ್ಷದ ಒಳಗಿನಿಂದಲೇ ಕೇಳಿಬರುತ್ತಿದ್ದು, ಉನ್ನತ ಅಧಿಕಾರ ಪ್ರಾಪ್ತಿಗಾಗಿ ಈ ಜೋಡಿ ದೇವಿಯ ಮೊರೆ ಹೋಗಿರಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ತಮ್ಮ ಈ ಭೇಟಿಯ ಫೋಟೋಗಳನ್ನು ಹಂಚಿಕೊಂಡು ಸಮೃದ್ಧಿಗಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದರೂ, ರಾಜಕೀಯ ವಲಯದಲ್ಲಿ ಮಾತ್ರ “ಮುಂದಿನ ಸಿಎಂ” ಮತ್ತು “ಮುಂದಿನ ಪ್ರಧಾನಿ” ಹುದ್ದೆಯ ಆಕಾಂಕ್ಷೆಗಳಿಗೆ ತಾಂತ್ರಿಕ ದೇವಿ ಒಲಿಯುವಳೇ ಎಂಬ ಕುತೂಹಲ ಮನೆಮಾಡಿದೆ.


