ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ತಿರುವುಗಳು ಸಿಗುತ್ತಿದ್ದು, ಸುಚಿತ್ರಾ ಎಂಬಾಕೆಯ ಹಿನ್ನೆಲೆ ಮತ್ತು ಆಕೆಯ ಹಣದ ದಾಹದ ಆಟ ಈಗ ಬಟಾಬಯಲಾಗುತ್ತಿದೆ. ಕಲಬುರಗಿಯ ಜಮೀನ್ದಾರನೊಬ್ಬನ ಜೊತೆ ಈಕೆ ನಡೆಸಿದ್ದ ಮೂರು ವರ್ಷಗಳ ‘ಲಿವ್-ಇನ್’ ಸಂಬಂಧದ ವಿಚಾರ ಈಗ ಬಯಲಿಗೆ ಬಂದಿದ್ದು, ಇದು ಕಮಲಾಕರ್ ಭಟ್ ಸಾವಿನ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಎಂಬಾತನ ಜೊತೆ ಸುಚಿತ್ರಾ ಸುಮಾರು ಮೂರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಆತನ ಹಣದ ಸಹಾಯದಿಂದಲೇ ‘ಅಪ್ಪು ಮೆಲೋಡಿಸ್ ಗುಲ್ಬರ್ಗ’ ಎಂಬ ಆರ್ಕೆಸ್ಟ್ರಾ ತಂಡವನ್ನು ಕಟ್ಟಿಕೊಂಡಿದ್ದಳು. ಆತನೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ಫೋಟೋಗಳು ಈಗ ಲಭ್ಯವಾಗಿದ್ದು, ಗಂಡನಿಲ್ಲದ ಸಮಯದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಜಮೀನ್ದಾರ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ನೀಡುತ್ತಿದ್ದಳು ಎಂಬ ಗಂಭೀರ ಮಾಹಿತಿಯೂ ಹೊರಬಂದಿದೆ. ಈ ವಿಚಾರ ಜ್ಯೋತಿಷಿ ಕಮಲಾಕರ್ ಭಟ್ಗೆ ತಿಳಿಯುತ್ತಿದ್ದಂತೆಯೇ ಇಬ್ಬರ ನಡುವೆ ಭಾರಿ ಮನಸ್ತಾಪ ಶುರುವಾಗಿತ್ತು.
ಸುಚಿತ್ರಾಳ ಈ ಹಣದ ದಾಹದ ನಡುವೆ ಸಿಲುಕಿದ್ದ ಕಮಲಾಕರ್ ಭಟ್, ಆಕೆಗೆ ಕಾರು ಮತ್ತು ಬೈಕ್ಗಳನ್ನು ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. ಇತ್ತ ಪತ್ನಿಯ ಅಕ್ರಮ ಸಂಬಂಧಗಳಿಂದ ಬೇಸತ್ತಿದ್ದ ಆಕೆಯ ಪತಿ ಮಹೇಶ್ ನಾಯ್ಕ, ಕಳೆದ ಆರು ತಿಂಗಳಿಂದ ಆಕೆಯಿಂದ ದೂರವಿದ್ದರು. ಶರಣಬಸಪ್ಪ ಸೇರಿದಂತೆ ಹಲವರ ಜೊತೆ ಸುಚಿತ್ರಾ ಹೊಂದಿದ್ದ ಸಂಬಂಧಗಳ ಬಗ್ಗೆ ಮಹೇಶ್ ನಾಯ್ಕ ಈಗ ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ. ಹಣಕ್ಕಾಗಿ ಯಾರನ್ನಾದರೂ ಬಲಿಪಶು ಮಾಡುವ ಆಕೆಯ ಚಾಳಿ ಈಗ ಕಾನೂನಿನ ಕಪಿಮುಷ್ಟಿಗೆ ಸಿಲುಕುವಂತೆ ಮಾಡಿದೆ.


