Thursday, November 20, 2025
19.9 C
Bengaluru
Google search engine
LIVE
ಮನೆದೇಶ/ವಿದೇಶಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ನಿರ್ಬಂಧಿಸಲು ಸುಪ್ರೀಂ ನಕಾರ

ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ನಿರ್ಬಂಧಿಸಲು ಸುಪ್ರೀಂ ನಕಾರ

ಬೆಂಗಳೂರು: ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಮಾನಹಾನಿಕರ ವರದಿಗಳ ಪ್ರಕಟಣೆಯನ್ನು ತಡೆಯುವಂತೆ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಆದರೆ, ಇದೇ ವೇಳೆ ಈ ಪ್ರಕರಣದಲ್ಲಿ ಮಾಧ್ಯಮಗಳನ್ನು ಪ್ರತಿಬಂಧಿಸುವಂತಹ ಆದೇಶ ನೀಡಬೇಕೆ ಎನ್ನುವ ಬಗ್ಗೆ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಸಂಶಯ ವ್ಯಕ್ತಪಡಿಸಿತು.

ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣದ ವರದಿಗೆ ಸಂಬಂಧಿಸಿದಂತೆ ಬೆಂಗಳೂರು ಸಿವಿಲ್ ನ್ಯಾಯಾಲಯವು ಯೂಟ್ಯೂಬ್ ಚಾನೆಲ್ ಕುಡ್ಲ ರಾಂಪೇಜ್ ಮೇಲೆ ವಿಧಿಸಿದ್ದ ಪ್ರತಿಬಂಧಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ವಿರುದ್ಧ ಧರ್ಮಸ್ಥಳ ದೇವಾಲಯ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.

ದೇವಾಲಯ ಆಡಳಿತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ದಿನದಿಂದ ದಿನಕ್ಕೆ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ವಾದಿಸಿದರು. ಆದರೆ, ಇದಕ್ಕಾಗಿ ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಬೇಕೇ ಎಂದು ಪೀಠವು ಪ್ರಶ್ನಿಸಿತು.

“ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗುತ್ತದೆ. ಉದಾಹರಣೆಗೆ, ಪೊಲೀಸ್ ಅಧಿಕಾರಿಯ ಬಳಿ ಭಯೋತ್ಪಾದಕರ ಮಾಹಿತಿ ಇರುವುದು ಪತ್ರಕರ್ತನಿಗೆ ತಿಳಿಯುತ್ತದೆ ಎಂದುಕೊಳ್ಳಿ. ಆ ಮಾಹಿತಿಯನ್ನು ಪ್ರಕಟಿಸಲಾಗದು. ಆದರೆ, ಈ ಪ್ರಕರಣದಲ್ಲಿ ಪ್ರತಿಬಂಧಿಸುವ ಆದೇಶಗಳು ವ್ಯಾಪಕ ನಿರ್ಬಂಧಕ ಆದೇಶಗಳಾಗಿವೆ. ಅವು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ. ಈ ಪ್ರಕರಣದಲ್ಲಿ ಒಬ್ಬ ನೈರ್ಮಲ್ಯ ಕೆಲಸಗಾರನಿದ್ದಾನೆ. ನಾವು ನಿರ್ಬಂಧಕ ಆದೇಶ ಜಾರಿಗೊಳಿಸಿದರೆ ಆತನ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು.

ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಸ್ವತಂತ್ರವಾಗಿ ನಿರ್ಧರಿಸಲಿ ಎಂದು ನ್ಯಾ. ಮನಮೋಹನ್‌ ಹೇಳಿದರು. ಮೀಮ್‌ಗಳ ವಿಚಾರವಾಗಿ ಪೀಠವು, “ಇದೆಲ್ಲವೂ ಮೀಮ್‌ಗಳಾಗಿವೆ. ಇದನ್ನು ತೆಗೆದುಹಾಕಲು ಹೇಳಬಹುದು. ನೀವು ಹೇಳಿದಂತೆ ಇದಕ್ಕೆಲ್ಲಾ ಒಂದು ಮಿತಿ ಇರಬೇಕು” ಎಂದು ಸಹಮತಿಸಿತು.

ಅಂತಿಮವಾಗಿ, “ಇದೆಲ್ಲವನ್ನೂ ವಿಚಾರಣಾ ನ್ಯಾಯಾಲಯದ ಗಮನಕ್ಕೆ ತನ್ನಿ. ಅವರು ಸ್ವತಂತ್ರವಾಗಿ ತಮ್ಮ ವಿವೇಚನೆಯನ್ನು ಬಳಸಿ ನಿರ್ಧರಿಸಲಿ” ಎಂದಿತು.

ವಿಚಾರಣೆಯ ಒಂದು ಹಂತದಲ್ಲಿ ರೋಹಟ್ಗಿ ಅವರು, “ಕೇವಲ ಒಬ್ಬ ವ್ಯಕ್ತಿಯು ಹೈಕೋರ್ಟ್ ಮೆಟ್ಟಿಲೇರಿದ್ದು (ಕುಡ್ಲ ರ್ಯಾಂಪೇಜ್‌), ಯಾರು ನ್ಯಾಯಾಲಯವನ್ನು ಎಡತಾಕುತ್ತಾರೋ ಅವರಿಗೆ ಮಾತ್ರವೇ ಲಾಭ ದೊರೆಯಬೇಕು. ಆದರೆ, ಈ ಪ್ರಕರಣದಲ್ಲಿ ಉಳಿದ 299 ಮಂದಿಗೂ ಮಾಧ್ಯಮ ಸಂಸ್ಥೆಗಳು ಲಾಭ ದೊರೆತಿದ್ದು ಹೇಗೆ? ಹೀಗಾಗಿ ಪೀಠವು ಏನಾದರೊಂದು ರಕ್ಷಣೆಯನ್ನು ನೀಡಬೇಕು,” ಎಂದು ಮತ್ತೆ ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿದರು.

ಈ ವಾದವನ್ನು ಪುರಸ್ಕರಿಸದ ಪೀಠವು, ಮಧ್ಯಂತರ ನಿರ್ಬಂಧಕ ಆದೇಶವನ್ನು ಕೋರಿರುವ ದೇವಸ್ಥಾನ ಆಡಳಿತದ ಅರ್ಜಿಯನ್ನು ಹೊಸದಾಗಿ ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments