ನಟ ದರ್ಶನ್ ಬಂಧನದ ನಂತರ ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಕಾರಣದಿಂದಲೇ ದರ್ಶನ್ ಸದ್ಯಕ್ಕೆ ಯಾವುದೇ ಹೊಸ ಜಾಮೀನು ಅರ್ಜಿ ಸಲ್ಲಿಸದೆ ಜೈಲಿನಲ್ಲೇ ಉಳಿದಿದ್ದಾರೆ ಎನ್ನಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಯಾಂಡಲ್ವುಡ್ನ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನೀಡಿರುವ ಹೇಳಿಕೆಯೊಂದು ದರ್ಶನ್ ಅಭಿಮಾನಿಗಳಲ್ಲಿ ಹೊಸ ಚೈತನ್ಯವನ್ನು ತುಂಬಿದೆ.

ದರ್ಶನ್ ಮತ್ತು ರವಿಚಂದ್ರನ್ ನಡುವೆ ಉತ್ತಮ ಬಾಂಧವ್ಯವಿದ್ದು, 2023ರ ‘ಕ್ರಾಂತಿ’ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ದರ್ಶನ್ ಅವರಿಗೆ ರವಿಚಂದ್ರನ್ ಕಂಡರೆ ಅಪಾರ ಗೌರವವಿದ್ದರೆ, ರವಿಚಂದ್ರನ್ ಅವರು ಕೂಡ ದರ್ಶನ್ ಅವರನ್ನು ತಮ್ಮ ಮಗನಂತೆ ಕಾಣುತ್ತಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳು ‘ಡಿ ಬಾಸ್’ ಎಂದು ಘೋಷಣೆ ಕೂಗಿದಾಗ, ರವಿಚಂದ್ರನ್ ಅವರು ದರ್ಶನ್ ಬಿಡುಗಡೆಯ ಬಗ್ಗೆ ಮಹತ್ವದ ಸುಳಿವು ನೀಡಿದರು. ದರ್ಶನ್ ಅವರು ಇನ್ನು ಎರಡು ತಿಂಗಳಲ್ಲಿ ಆಚೆ ಬರುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್ ಅವರು, “ನನ್ನ ಬಾಯಲ್ಲಿ ಹೇಳುತ್ತಿದ್ದೇನೆ, ಅವರು ಖಂಡಿತಾ ಬರುತ್ತಾರೆ. ನಿಮಗೆಲ್ಲ ಅವರು ಡಿ ಬಾಸ್ ಇರಬಹುದು, ಆದರೆ ನನಗೆ ಅವರು ಮಗನಿದ್ದಂತೆ” ಎಂದು ಭಾವುಕರಾಗಿ ನುಡಿದರು. ಕೆಟ್ಟ ಸಮಯ ಮನುಷ್ಯನನ್ನು ಕುಗ್ಗಿಸಿದರೂ, ಕಾಲ ಎಲ್ಲವನ್ನೂ ಸರಿಪಡಿಸುತ್ತದೆ ಮತ್ತು ಮತ್ತೆ ಮೇಲೆತ್ತುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಅಲ್ಲಿಯವರೆಗೆ ಅಭಿಮಾನಿಗಳು ತಾಳ್ಮೆಯಿಂದ ಕಾಯಬೇಕು ಮತ್ತು ಅವರನ್ನು ಎದೆಯಲ್ಲೇ ಇಟ್ಟು ಪೂಜಿಸಬೇಕು ಎಂದು ಕಿವಿಮಾತು ಹೇಳಿದರು.

ಬಂಧಿತರಾಗಿರುವ ಪವಿತ್ರಾ ಗೌಡ ಅವರು ತಮ್ಮ ಮಗಳ ಪರೀಕ್ಷೆಯ ಕಾರಣ ನೀಡಿ 21 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿದೆ. ಕಾನೂನಿನ ಈ ಬಿಗಿ ಕ್ರಮಗಳಿಂದಾಗಿ ದರ್ಶನ್ ಅವರ ಜಾಮೀನು ಪ್ರಕ್ರಿಯೆಯೂ ವಿಳಂಬವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೂ ರವಿಚಂದ್ರನ್ ಅವರ ಮಾತುಗಳು ದರ್ಶನ್ ಬೆಂಬಲಿಗರಲ್ಲಿ ಸದ್ಯಕ್ಕೆ ದೊಡ್ಡ ಮಟ್ಟದ ಸಮಾಧಾನ ತಂದಿದೆ.


