ವಿಜಯಪುರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು” ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತದೆ ಎಂದಿರುವ ಮಾತು ತೀರಾ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಮುಖಂಡ, ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಬಾಬು ರಾಜೇಂದ್ರ ನಾಯ್ಕ್ ವ್ಯಂಗ್ಯವಾಡಿದ್ದಾರೆ. ದುಡಿಯಲು ಮನಸ್ಸಿದ್ದ ಕನ್ನಡಿಗ ಯುವಜನತೆಯನ್ನು ನಿರುದ್ಯೋಗಿಗಳನ್ನಾಗಿಸಿ, ಭತ್ಯೆ ಕೊಡುತ್ತೇವೆ ಎಂದು ಭರವಸೆ ನೀಡಿ, ಅವರನ್ನು ಸೋಮಾರಿಗಳನ್ನಾಗಿಸಲು ಪ್ರಯತ್ನಿಸಿದ್ದು ಯಾರು ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ವಿಜಯಪುರ ಜಿಲ್ಲೆಯ ದೊಡ್ಡ ಸಂಖ್ಯೆಯ ಯುವ ಜನತೆ ಗುಳೆ ಹೋಗುತ್ತಿದ್ದಾರೆ. ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರಕ್ಕೆ, ನಮ್ಮ ಉತ್ತರ ಕರ್ನಾಟಕಕ್ಕೆ ಅವಕಾಶಗಳನ್ನು ನೀಡಬೇಕೆಂಬ ಕನಿಷ್ಠ ಇಚ್ಛಾಶಕ್ತಿಯೂ ಇಲ್ಲ ಎಂದು ಕಿಡಿಕಾರಿದ್ದಾರೆ. ಕರ್ನಾಟಕಕ್ಕೆ ಹಿಂದಿನ ಯುಪಿಎ ಸರ್ಕಾರ ಕೊಡುತ್ತಿದ್ದುದಕ್ಕಿಂತಲೂ ಹೆಚ್ಚಿನ ಕೊಡುಗೆಗಳನ್ನು ಇಂದಿನ ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಉತ್ತರ ಕರ್ನಾಟಕಕ್ಕೆ ದಿವ್ಯ ನಿರ್ಲಕ್ಷ್ಯ ತೋರಿ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಾಬು ರಾಜೇಂದ್ರ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ರು.
“ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು” ಎಂದು ಸಿದ್ದರಾಮಯ್ಯನವರು ಹೇಳಿರುವುದು ನಮ್ಮ ವಿಜಯಪುರಕ್ಕೆ ಸೂಕ್ತವಾಗಿದೆ. ನಮ್ಮ ಪಾಲಿಗೆ ಬರೆಗಳ ಮೇಲೆ ಬರೆಗಳು ಬೀಳುತ್ತಿವೆಯೇ ಹೊರತು, ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ! ನಮ್ಮ ಮೇಲೆ ಬರೆ ಎಳೆಯುವುದನ್ನು ನಿಲ್ಲಿಸಿ, ಇನ್ನಾದರೂ ಉತ್ತರ ಕರ್ನಾಟಕದ ಕಡೆ ಕಣ್ಣು ಹಾಯಿಸಿ ಮುಖ್ಯಮಂತ್ರಿಗಳೇ ಎಂದು ಬಾಬು ರಾಜೇಂದ್ರ ನಾಯ್ಕ್ ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲದೆ, ಸಿದ್ದರಾಮಯ್ಯನವರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಹಿಂದೆ ಯಾವ ಸರ್ಕಾರವೂ ನೀಡದಷ್ಟು ಅನುದಾನವನ್ನು ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಹತ್ತು ವರ್ಷಗಳ ಅವಧಿಯಲ್ಲಿ ತೆರಿಗೆ ಹಂಚಿಕೆಯಾಗಿ 66 ಸಾವಿರ ಕೋಟಿ ರೂಪಾಯಿ ಬಂದಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ 2.36 ಲಕ್ಷ ಕೋಟೆ ರೂಪಾಯಿ ನೀಡಿದೆ. ಯುಪಿಎ 86 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದರೆ, ಬಿಜೆಪಿ ಸರ್ಕಾರ 2.82 ಲಕ್ಷ ಕೋಟಿ ನೀಡಿದೆ. ಇದರಿಂದ ತೆರಿಗೆ ಮತ್ತು ಅನುದಾನ ಹಂಚಿಕೆ ಎರಡೂ 240 %ಗೂ ಹೆಚ್ಚಿನ ಹೆಚ್ಚಳ ಕಂಡಿವೆ. ಈ ಸತ್ಯವನ್ನು ಯಾಕೆ ಸಿದ್ದರಾಮಯ್ಯನವರು ಮರೆಮಾಚುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ರು.
ರಾಜ್ಯದಲ್ಲಿ ಆಡಳಿತ ನಡೆಸುವುದನ್ನು ಬಿಟ್ಟು, ಅನವಶ್ಯಕ ಭಾಗ್ಯಗಳಿಗೆ ಖರ್ಚು ಮಾಡಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಬಾಬು ರಾಜೇಂದ್ರ ನಾಯ್ಕ್ ವಾಗ್ದಾಳಿ ನಡೆಸಿದ್ರು.