Top Newsರಾಜಕೀಯಸುದ್ದಿ

ಸಚಿವ ಚಲುವರಾಯಸ್ವಾಮಿ ಮೇಲೆ ಹಲ್ಲೆ ಮಾಡಿದ್ರಾ ಕಿಲಾರ ಜಯರಾಂ..? ಇಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಮೈಸೂರು: ಇಲ್ಲಿನ ಖಾಸಗಿ ಹೋಟೆಲ್​​ನಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮೇಲೆ ಕಾಂಗ್ರೆಸ್ ಮುಖಂಡ ಕಿಲಾರ ಜಯರಾಂ ಹಲ್ಲೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಮಗಳ ನಿಶ್ಚಿತಾರ್ಥದಲ್ಲಿ ಸಚಿವ ಚಲುವರಾಯಸ್ವಾಮಿ ಹಾಗೂ ಕಿಲಾರ ಜಯರಾಂ ಭಾಗವಹಿಸಿದ್ದರು. ಖಾಸಗಿ  ಹೋಟೆಲ್​ನ ಕೆಳಮಹಡಿಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ಊಟದ ವ್ಯವಸ್ಥೆ ಮಾಡಲಾಗಿದ್ದ ಮೂರನೇ ಮಹಡಿಯಲ್ಲಿ ವರ್ಗಾವಣೆ ವಿಚಾರವಾಗಿ ಚಲುವರಾಯಸ್ವಾಮಿ ಹಾಗೂ ಕಿಲಾರ ಜಯರಾಂ ನಡುವೆ ವಾಗ್ದಾದ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರು ಕೈ, ಕೈ ಮಿಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಚಲುವರಾಯಸ್ವಾಮಿ ಕುರಿತು ಕಿಲಾರ ಜಯರಾಂ ಅವರು ನಿಂದನೆಯ ಮಾತಗಳನ್ನು ಆಡಿದರು. ಇದರಿಂದ ಕೆರಳಿದ ಸಚಿವರ ಬೆಂಬಲಿಗರು ಕಿಲಾರ ಜಯರಾಂ ಅವರನ್ನು ತಳ್ಳಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವ್ಯಾಪಕವಾಗಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ದಂಧೆ ವಿಚಾರವಾಗಿಯೇ ಮೈಸೂರಿನಲ್ಲಿ ಸಚಿವರು, ಮತ್ತಿತರರು ಹೊಡೆದಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆದಿದ್ದಾರೆ ಎಂದು ಕೇಂದ್ರ ಸಚಇವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಕಿಲಾರ ಜಯರಾಂ ಅವು, ನಮ್ಮಿಬ್ಬರ ನಡುವೆ ಯಾವುದೇ ವಾಗ್ದಾದ ನಡೆದಿಲ್ಲ. ನಿಶ್ಚಿತಾರ್ಥಕ್ಕೆ ಬಂದಿದ್ದ ಅವರಿಗೆ ನಮಸ್ಕರಿಸಿ ನಾನು ಹೊರಬಂದೆ ಅಷ್ಟೇ ಎಂದು ಸ್ಪಷ್ಟನೆ ನೀಡಿಸಿದ್ದಾರೆ. ಈ ಮಧ್ಯೆ, ಕುಮಾರಸ್ವಾಮಿ ಆರೋಪವನ್ನು ತಳ್ಳಿ ಹಾಕಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಅವರಿಗೂ ನಮಗೂ ಯಾವ ವ್ಯವಹಾರ..? ನಾವಿಬ್ಬರು 40 ವರ್ಷಗಳಿಂದ ಸ್ನೇಹಿತರು. ನಿಶ್ಚಿತಾರ್ಥದಲ್ಲೂ ಅವರನ್ನು ಹುಡುಕಿಕೊಂಡು ಹೋಗಿಲ್ಲ.. ಬೇಕಿದ್ದರೆ ಕಿಲಾರ ಜಯರಾಂ ಅವರನ್ನೇ ಕೇಳಿ ಎಂದು ತಿಳಿಸಿದ್ದಾರೆ.

ಇನ್ನು, ಕೆಲವು ತಿಂಗಳ ಹಿಂದಷ್ಟೇ ನಡೆದಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಿಲಾರ ಜಯರಾಂ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದಕ್ಕೂ ಮುಂಚೆ ಕಿಲಾರ ಜಯರಾಂ ಅವರು ಜೆಡಿಎಸ್​ ಪಕ್ಷದ​ಲ್ಲಿದ್ದರು.

Comments (0)

Your email address will not be published. Required fields are marked *

Back to top button