ಮೈಸೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗಳನ್ನು ನಿನ್ನೆ ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರದಾನ ಮಾಡಿದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸ್ವಚ್ಛ ನಗರಗಳು, ಸ್ವಚ್ಛ ಕಂಟೋನ್ಮೆಂಟ್, ಸಫಾಯಿಮಿತ್ರ ಸುರಕ್ಷಾ, ಗಂಗಾ ಪಟ್ಟಣಗಳು ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ 13 ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.
2016ರಲ್ಲಿ ಪ್ರಥಮ ರಾಷ್ಟ್ರೀಯ ಮಟ್ಟದ ಸ್ವಚ್ಛ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದ ಮೈಸೂರು ನಗರ ಇದೀಗ 2023ರ ಶ್ರೇಯಾಂಕದಲ್ಲಿ 27ನೇ ಸ್ಥಾನಕ್ಕೆ ಕುಸಿದಿದೆ. ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ 2022 ರಲ್ಲಿ, ಮೈಸೂರು ದೇಶದ ಟಾಪ್ 10 ಸ್ವಚ್ಛ ನಗರಗಳಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ, 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ “ಸ್ವಚ್ಛ ಮಧ್ಯಮ ನಗರ ಪ್ರಶಸ್ತಿ”ಯನ್ನ ಮೈಸೂರು ಮುಡಿಗೇರಿಸಿಕೊಂಡಿದೆ.
ಆದಾಗ್ಯೂ, ಮೈಸೂರು ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದಲ್ಲಿ ಸ್ವಚ್ಛ ನಗರವಾಗಿ ಉಳಿದಿದೆ ಮತ್ತು 3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಅಖಿಲ ಭಾರತ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಮೈಸೂರು ಪ್ರಶಸ್ತಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಜಂಟಿ ನಿರ್ದೇಶಕ ಅಶೋಕ್ ಸಿಂಘಿ ಪ್ರದಾನ ಮಾಡಿದರು. ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಆಯುಕ್ತ ಆಶಾದ್-ಉರ್-ರಹಮಾನ್ ಷರೀಫ್, ಎಂಸಿಸಿ ಉಪ ಆಯುಕ್ತ ಕೆ.ಜೆ.ಸಿಂಧು, ಕಾರ್ಯಪಾಲಕ ಎಂಜಿನಿಯರ್ ಬಿ.ನಾಗರಾಜ್, ಹಿರಿಯ ಆರೋಗ್ಯಾಧಿಕಾರಿ ಡಾ.ಎನ್.ಪಿ.ವೆಂಕಟೇಶ್ ಪ್ರಶಸ್ತಿ ಸ್ವೀಕರಿಸಿದರು.