ಬೆಳಗಾವಿ: ಜಮೀನಿನ ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲ ಸಂತೋಷ್ ಪಾಟೀಲ ಹತ್ಯೆಯಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾದ ಇಬ್ಬರಿಗಾಗಿ ಬಲೆ ಬೀಸಲಾಗಿದೆ ಎಂದು ಬೆಳಗಾವಿ ಜಿಲ್ಲೆ ಎಸ್ಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಂಧಿತರು ರಾಯಬಾಗ ತಾಲೂಕಿನ ಬಸ್ತವಾಡದ ಶಿವನಗೌಡ ಬಸಗೌಡ ಪಾಟೀಲ, ಭರತ ಕೋಳಿ, ಬಿರನಾಳದ ಕಿರಣ ಕೆಂಪವಾಡೆ, ಗೋಕಾಕ್ ತಾಲೂಕಿನ ಗುಜನಾಳದ ಉದಯ ಮುಶೆನ್ನವರ, ಬೈಲಹೊಂಗಲ ತಾಲೂಕಿನ ಚಂದೂರಿನ ಸುರೇಶ ನಂದಿ, ಹೊನ್ನಿಹಾಳದ ಮುಂಜುನಾಥ ತಳವಾರ ಬಂಧಿತರಾಗಿದ್ದಾರೆ . ರಾಯಬಾಗ ತಾಲೂಕಿನ ಅಳಗವಾಡಿಯ ಮಹಾವೀರ ಹಂಜೆ, ಹೊನ್ನಿಹಾಳದ ನಾಗರಾಜ ನಾಯಕ್ ಪರಾರಿಯಾಗಿದ್ದು, ಬಲೆ ಬೀಸಲಾಗಿದೆ ಎಂದ್ರು.
ಏಪ್ರಿಲ್ 29ರಂದು ಸವಸುದ್ದಿಯಿಂದ ರಾಯಬಾಗದ ನ್ಯಾಯಾಲಯಕ್ಕೆ ಬರುತ್ತಿದ್ದ ಸಂತೋಷನನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಬಳಿಕ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಸುಟ್ಟು ಹಾಕಿದ್ದರು.
ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.


