ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರಿಗೆ ನೌಕರರ ‘ಬೆಂಗಳೂರು ಚಲೋ’ ಮುಷ್ಕರದ ಬಿಸಿ ತಟ್ಟಿದ್ದು, ಬಸ್ ಸಂಚಾರ ಸುಗಮವಾಗಿದ್ದರೂ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಆಗ್ರಹಿಸಿ ನೌಕರರು ಈ ಪ್ರತಿಭಟನೆ ಕೈಗೊಂಡಿದ್ದಾರೆ. ಸರ್ಕಾರವು 26 ತಿಂಗಳ ಬಾಕಿ ಪಾವತಿಸಲು ಒಪ್ಪಿಗೆ ನೀಡಿದ್ದರೂ, ನೌಕರರ ಸಂಘಟನೆಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿ ಪೂರ್ಣ ಪ್ರಮಾಣದ ಬಾಕಿಗಾಗಿ ಪಟ್ಟು ಹಿಡಿದಿವೆ.
ಬೆಳಗ್ಗೆಯಿಂದ ಮೆಜೆಸ್ಟಿಕ್ ಸೇರಿದಂತೆ ನಗರದ ಪ್ರಮುಖ ನಿಲ್ದಾಣಗಳಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳು ಎಂದಿನಂತೆ ಸಂಚರಿಸುತ್ತಿವೆ. ಯಶವಂತಪುರ ಡಿಪೋದಂತಹ ಪ್ರಮುಖ ಕೇಂದ್ರಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಬಸ್ಗಳು ರಸ್ತೆಗಿಳಿದಿದ್ದು, ಸಿಬ್ಬಂದಿ ಗೈರುಹಾಜರಿ ಕಂಡುಬಂದಿಲ್ಲ. ಸದ್ಯ ರಾಜ್ಯದ ನಾಲ್ಕೂ ನಿಗಮಗಳಿಂದ ಒಟ್ಟು 10,879 ಬಸ್ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಜಾತ್ರಾ ವಿಶೇಷವಾಗಿ ಹೆಚ್ಚುವರಿ 591 ಬಸ್ಗಳನ್ನು ಸಹ ಒದಗಿಸಲಾಗಿದೆ.

ಬಸ್ ಸಂಚಾರ ವ್ಯವಸ್ಥಿತವಾಗಿದ್ದರೂ, ಮುಷ್ಕರದ ಭೀತಿಯಿಂದಾಗಿ ಸಾರ್ವಜನಿಕರು ಬಸ್ ನಿಲ್ದಾಣಗಳಿಗೆ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಜನನಿಬಿಡ ಪ್ರದೇಶಗಳಲ್ಲಿಯೂ ಪ್ರಯಾಣಿಕರಿಲ್ಲದೆ ಬಸ್ಗಳು ಖಾಲಿ ಓಡಾಡುವಂತಾಗಿದೆ. ಸರ್ಕಾರದ ಸಂಧಾನ ಯತ್ನಗಳಿಗೆ ಸೆಡ್ಡು ಹೊಡೆದಿರುವ ನೌಕರರ ಸಂಘಟನೆಗಳು, ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸಲು ಸಜ್ಜಾಗಿವೆ.
ಸಾರಿಗೆ ನೌಕರರ ಈ ಹೋರಾಟದ ಅಂತಿಮ ನಿರ್ಧಾರ ಇಂದು ಸಂಜೆ 4 ಗಂಟೆಗೆ ಹೊರಬೀಳುವ ಸಾಧ್ಯತೆ ಇದೆ. ಸಂಜೆ ನಡೆಯಲಿರುವ ಮಹತ್ವದ ಸಭೆಯಲ್ಲಿ ಸಂಘಟನೆಗಳು ತಮ್ಮ ಮುಂದಿನ ನಿರ್ಣಯವನ್ನು ಘೋಷಿಸಲಿವೆ. ಒಂದು ವೇಳೆ ಸಂಧಾನ ವಿಫಲವಾಗಿ ಮುಷ್ಕರ ತೀವ್ರಗೊಂಡರೆ, ಸಂಜೆಯ ನಂತರ ಅಥವಾ ನಾಳೆಯಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.


