ಬಿಗ್ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡು ತಿಂಗಳಾಗುತ್ತಾ ಬಂದಿದ್ದರೂ, ಮನೆಯೊಳಗೆ ಶುರುವಾಗಿದ್ದ ಕಿಚ್ಚು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಕಳೆದ ಸೀಸನ್ನ ಅತಿಥಿಯಾಗಿ ಬಂದಿದ್ದ ಚೈತ್ರಾ ಕುಂದಾಪುರ ನಡುವಿನ ಜಗಳ ಈಗ ವೈಯಕ್ತಿಕ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ಗಿಲ್ಲಿ ಅವರು ಈ ಸೀಸನ್ನ ವಿನ್ನರ್ ಆಗಿ ಹೊರಹೊಮ್ಮಿದ್ದರೂ, ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವುದು ಮಾತ್ರ ಈ ಇಬ್ಬರು ಮಹಿಳಾ ಮಣಿಗಳ ವಾಗ್ದಾಳಿ.

ಜಗಳದ ಕಿಡಿ ಹೊತ್ತಿಕೊಂಡಿದ್ದು ಅಶ್ವಿನಿ ಅವರು ಹಂಚಿಕೊಂಡಿದ್ದ ತರಚಿದ ಗಾಯಗಳ ಫೋಟೋದಿಂದ. ಅಶ್ವಿನಿ ಅವರು ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ, ಚೈತ್ರಾ ಕುಂದಾಪುರ ಅವರು “ಸಿಂಪತಿ ಗಿಟ್ಟಿಸಿಕೊಳ್ಳಲು ನನ್ನ ಹತ್ತಿರ ಪಿಆರ್ ಟೀಂ ಇಲ್ಲ” ಎಂದು ಟಾಂಗ್ ನೀಡಿದ್ದರು. ಅಲ್ಲಿಂದ ಶುರುವಾದ ಈ ಸಂಘರ್ಷ ಈಗ ಪರಸ್ಪರರ ಖಾಸಗಿ ಜೀವನದ ಬಗ್ಗೆ ಮಾತನಾಡುವ ಮಟ್ಟಕ್ಕೆ ತಲುಪಿದೆ. ಅಶ್ವಿನಿ ಅವರ ವಿಚ್ಛೇದನ ಮತ್ತು ನ್ಯಾಯಾಲಯದ ಪ್ರಕರಣಗಳ ಬಗ್ಗೆ ಚೈತ್ರಾ ಇತ್ತೀಚೆಗೆ ಗಂಭೀರ ಆರೋಪಗಳನ್ನು ಮಾಡಿದ್ದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಅಶ್ವಿನಿ ಗೌಡ, “ಮೂವರು ಗಂಡಂದಿರು, ಚೆಕ್ ಬೌನ್ಸ್ ಕೇಸುಗಳೆಲ್ಲ ಚೈತ್ರಾ ಅವರ ಸ್ವಂತ ಅನುಭವ ಇರಬಹುದು, ಅದನ್ನೇ ನನ್ನ ಮೇಲೆ ಹೇರುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ. “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಹಾಗೆ ಚೈತ್ರಾ ಅವರೇ ಮೊದಲು ರಿಯಾಕ್ಟ್ ಮಾಡಿದರು, ಅವರು ತಮ್ಮ ಮಿತಿಯಲ್ಲಿದ್ದರೆ ಅವರಿಗೆ ಒಳ್ಳೆಯದು” ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ “ಹುಡುಗರು ಬೇಗ ರಾಜಿ ಆಗ್ತಾರೆ, ಆದರೆ ಹೆಣ್ಣುಮಕ್ಕಳು ಹೊರಬಂದ ಮೇಲೂ ಜಗಳ ಮುಂದುವರಿಸುತ್ತಾರೆ” ಎನ್ನುವ ವಿನ್ನರ್ ಗಿಲ್ಲಿ ಅವರ ಹಳೆಯ ಡೈಲಾಗ್ ಈಗ ಅಕ್ಷರಶಃ ನಿಜವಾದಂತೆ ಕಾಣುತ್ತಿದೆ.


