ಒಡಿಶಾ: ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಯುವತಿಯೊಬ್ಬಳನ್ನು ನಂಬಿಸಿ ಅತ್ಯಾಚಾರಗೈದು, ಬಳಿಕ ಮತ್ತೊಬ್ಬ ಆರೋಪಿ ಆಕೆಯನ್ನು ಸಾಯುವಂತೆ ಹಿಂಸಿಸಿ ಕಟ್ಟಡದಿಂದ ಎಸೆದು ಕೊಲೆ ಮಾಡಿರುವ, ಭೀಕರ ಘಟನೆ ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ ನಡೆದಿದೆ.
ಕೇವಲ 23 ವರ್ಷದ ಯುವತಿ ಈ ಕ್ರೌರ್ಯಕ್ಕೆ ಬಲಿಯಾಗಿದ್ದು, ಇಡೀ ರಾಜ್ಯವನ್ನು ಈ ಘಟನೆ ಬೆಚ್ಚಿಬೀಳಿಸಿದೆ. ಮೃತ ಯುವತಿಯು ಓರ್ವ ಯುವಕನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಆತ ಆಕೆಯನ್ನು ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ನಂಬಿಸಿ, ಫೆಬ್ರವರಿ 22ರಂದು ಮನೆಯಿಂದ ಹೊರಬರುವಂತೆ ಹೇಳಿದ್ದ. ಪ್ರಿಯಕರನ ಮಾತು ನಂಬಿದ ಯುವತಿ ತನ್ನ ಸುಂದರ ಭವಿಷ್ಯದ ಕನಸು ಹೊತ್ತು ಮನೆ ಬಿಟ್ಟು ಬಂದಿದ್ದಳು. ಆದ್ರೆ, ಆಕೆಯ ಪ್ರಿಯಕರ ಮೊದಲೇ ಸಂಚು ರೂಪಿಸಿದ್ದ.ಯುವತಿ ಮನೆ ಬಿಟ್ಟು ಬರುತ್ತಿದ್ದಂತೆ, ಆಕೆಯನ್ನು ಏಕಾಂತ ಸ್ಥಳವೊಂದಕ್ಕೆ ಕರೆದೊಯ್ದ ಪ್ರಿಯಕರ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಆಕೆಯನ್ನು ಮದುವೆಯಾಗದೆ, ಅಸಹಾಯಕ ಸ್ಥಿತಿಯಲ್ಲಿ ರಹಾಮ ಬಸ್ ನಿಲ್ದಾಣದಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಬಸ್ ನಿಲ್ದಾಣದಲ್ಲಿ ಅಸಹಾಯಕಳಾಗಿ ನಿಂತಿದ್ದ ಯುವತಿಯನ್ನು ಕಂಡ ಜಾರ್ಖಂಡ್ ಮೂಲದ ಮತ್ತೊಬ್ಬ ಆರೋಪಿ, ಸಹಾಯ ಮಾಡುವ ನಾಟಕವಾಡಿದ್ದಾನೆ. ತಾನು ನಿನಗೆ ರಕ್ಷಣೆ ನೀಡುವುದಾಗಿ ನಂಬಿಸಿದ ಆತ, ಆಕೆಯನ್ನು ಪರದೀಪ್ ಪಟ್ಟಣದಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿ ಆಕೆಗೆ ಮತ್ತೊಂದು ಆಘಾತ ಕಾದಿದ್ದು.. ಆ ಕ್ರೂರಿ ಯುವತಿಯನ್ನು ಕಟ್ಟಡದ ಛಾವಣಿಯ ಮೇಲೆ ಕರೆದೊಯ್ದು ಅತ್ಯಾಚಾರ ಮಾಡಿ. ತನ್ನ ಕೃತ್ಯ ಯಾರಿಗೂ ತಿಳಿಯಬಾರದೆಂಬ ಉದ್ದೇಶದಿಂದ ಮತ್ತು ಯುವತಿಯ ಪ್ರತಿರೋಧವನ್ನು ಅಡಗಿಸಲು, ಆಕೆಯನ್ನು ಬಹುಮಹಡಿ ಕಟ್ಟಡದ ಮೇಲಿಂದ ಕೆಳಕ್ಕೆ ಎಸೆದು ಕೊಲೆ ಮಾಡಿದ್ದಾನೆ.
ಫೆಬ್ರವರಿ 23ರಂದು ಮುಂಜಾನೆ ಯುವತಿಯ ಶವ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಅಸ್ವಾಭಾವಿಕ ಸಾವು ಎಂದು ಭಾವಿಸಲಾಗಿತ್ತು. ಆದರೆ, ಯುವತಿಯ ಸಹೋದರ ಈಗಾಗಲೇ ನೀಡಿದ್ದ ನಾಪತ್ತೆ ದೂರು ಮತ್ತು ನಂತರ ನೀಡಿದ ಅತ್ಯಾಚಾರ-ಕೊಲೆ ದೂರಿನ ಅನ್ವಯ ಪೊಲೀಸರು ತನಿಖೆ ಚುರುಕುಗೊಳಿಸಿದರು.
“ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಮೇಲೆ ಅಪಹರಣ, ಅತ್ಯಾಚಾರ ಮತ್ತು ಕೊಲೆ ಸೇರಿದಂತೆ BNS ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,” ಎಂದು ಜಗತ್ಸಿಂಗ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಕುಮಾರ್ ವರ್ಮಾ ತಿಳಿಸಿದ್ದಾರೆ.


