BELAGAVIಕ್ರೈಂ ಸ್ಟೋರಿಸುದ್ದಿ

ವಿಧಿಯಾಟಕ್ಕೆ ಛಿದ್ರವಾಯ್ತು ಸುಂದರ ಸಂಸಾರ..!

ಬೆಳಗಾವಿ: ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ವಿಧಿಯಾಟಕ್ಕೆ ಒಂದು ಸುಂದರ ಕುಟುಂಬವೇ ಛಿದ್ರವಾಗಿರುವ ಅತ್ಯಂತ ಕರುಣಾಜನಕ ಘಟನೆ ನಡೆದಿದೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಆಸ್ಪತ್ರೆಗೆ ಧಾವಿಸುತ್ತಿದ್ದ ಪತಿ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಇಡೀ ಜಿಲ್ಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮಧುರಾ ಕರೆಪ್ಪ ಮಾದರ (30) ಹಾಗೂ ಕರೆಪ್ಪ ಗಂಗಪ್ಪ ಮಾದರ (36) ಮೃತಪಟ್ಟ ದುರ್ದೈವಿ ದಂಪತಿಗಳು. ಕಳೆದ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಮೂವರು ಪುಟ್ಟ ಮಕ್ಕಳನ್ನು ಅಗಲಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.

ಘಟನೆಯ ಹಿನ್ನೆಲೆಯೆಂದರೆ, ಮಧುರಾ ಅವರು ದೀರ್ಘಕಾಲದ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಈ ನೋವಿನಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದರು. ಇತ್ತ ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತಿ ಕರೆಪ್ಪ, ಕೂಡಲೇ ಆಸ್ಪತ್ರೆಗೆ ತಲುಪಬೇಕೆಂಬ ಗಡಿಬಿಡಿಯಲ್ಲಿ ಬೈಕ್‌ನಲ್ಲಿ ಬೆಳಗಾವಿಗೆ ಬರುತ್ತಿದ್ದರು. ಈ ವೇಳೆ ಅರವಳ್ಳಿ ಕ್ರಾಸ್ ಬಳಿ ಧಾರವಾಡದಿಂದ ವೇಗವಾಗಿ ಬಂದ ಕೆಎಸ್ಆರ್‌ಟಿಸಿ ಬಸ್ ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ದಂಪತಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದು, ಒಂದೇ ದಿನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಸುಖವಾಗಿರಬೇಕಿದ್ದ ಸಂಸಾರದಲ್ಲಿ ವಿಧಿಯ ಆಟದಿಂದಾಗಿ ಅನಾಥರಾದ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಕುಟುಂಬಸ್ಥರ ದುಃಖಕ್ಕೆ ಪಾರವೇ ಇಲ್ಲದಂತಾಗಿದೆ. ಇಡೀ ಗ್ರಾಮವೇ ಈ ಘಟನೆಯಿಂದ ಸ್ತಬ್ಧವಾಗಿದ್ದು, ಸಾವು ಎಷ್ಟು ಕ್ರೂರವಾಗಿ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

Comments (0)

Your email address will not be published. Required fields are marked *

Back to top button