ಬಳ್ಳಾರಿ: ಸಂಡೂರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಂಗಾರು ಹನುಮಂತು ಮೂಲತಃ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯವರು. ಬಿಎ,ಬಿಇಡ್ ಪದವೀಧರ. ಇವರ ತಂದೆ ಸೋಮಣ್ಣ ಅವರು ಕೆಎಸ್ಆರ್ಟಿಸಿ ಚಾಲಕರಾಗಿದ್ದರು. ಕೂಡ್ಲಿಗಿಯಲ್ಲಿ ನಿವೃತ್ತಿಯಾದರು. ಹೀಗಾಗಿ ಬಂಗಾರು ಹನುಮಂತು ಕುಟುಂಬ ಕೂಡ್ಲಿಗಿಯಲ್ಲಿ ನೆಲೆಸಿದೆ. ಹನುಮಂತು ಅವರ ತಾಯಿ ಹುಲಿಗೆಮ್ಮ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಬಿಜೆಪಿಯ ಹಾಲಿ ಸದಸ್ಯರಾಗಿದ್ದಾರೆ. ಬಂಗಾರು ಹನುಮಂತು ರಿಯಲ್ ಎಸ್ಟೇಟ್, ಟ್ರಾನ್ಸ್ಪೋರ್ಟ್, ಕ್ರಷರ್, ಸಿವಿಲ್ ವರ್ಕ್ಸ್, ಉದ್ಯಮ ನಡೆಸುತ್ತಿದ್ದಾರೆ. ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯ ಬಿಜೆಪಿಯ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದಾರೆ. 2018ರ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 7,191 ಮತಗಳಿಸಿದ್ದರು. ಬಳಿಕ ಬಿಜೆಪಿ ಸೇರಿದರು.