ಜಯರಾಜ್-ಬೆನ್ನಿಕ್ಸ್ ಲಾಕಪ್ ಸಾವು ಪ್ರಕರಣದ 9 ಪೊಲೀಸರಿಗೆ ಗಲ್ಲು ಶಿಕ್ಷೆ

ತಮಿಳುನಾಡಿನ ತೂತುಕುಡಿಯ ಸಾತಂಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಲಾಕಪ್ ಸಾವು ಭಾರತೀಯ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ಕಪ್ಪು ಚುಕ್ಕೆಯಾಗಿ ಉಳಿಯುವಂತಹ ಘಟನೆ. 2020ರ ಜೂನ್ನಲ್ಲಿ ಕೇವಲ 15 ನಿಮಿಷ ತಡವಾಗಿ ಮೊಬೈಲ್ ಅಂಗಡಿ ಮುಚ್ಚಿದರು ಎಂಬ ಸಣ್ಣ ಕಾರಣಕ್ಕೆ ಆರಂಭವಾದ ಈ ವಿವಾದ, ಪೊಲೀಸರ ಅಮಾನವೀಯ ಹಿಂಸೆಯಿಂದಾಗಿ ಇಬ್ಬರು ಅಮಾಯಕರ ಬಲಿಗೆ ಕಾರಣವಾಯಿತು. ಈ ಘಟನೆಯು ಕೇವಲ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿತ್ತು ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು. ಮದುರೈ ನ್ಯಾಯಾಲಯವು ಈಗ ನೀಡಿರುವ ಗಲ್ಲು ಶಿಕ್ಷೆಯ ತೀರ್ಪು ಕೇವಲ ಒಂದು ಕುಟುಂಬಕ್ಕೆ ಸಿಕ್ಕ ನ್ಯಾಯವಲ್ಲ, ಬದಲಾಗಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ ಎಚ್ಚರಿಕೆಯ ಗಂಟೆಯಾಗಿದೆ.
ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಮೈ ಜುಂ ಎನ್ನುವಂತಹ ಸತ್ಯಗಳು ಹೊರಬಂದಿದ್ದವು. ಪೊಲೀಸರು ತಂದೆ-ಮಗನನ್ನು ಠಾಣೆಯಲ್ಲಿ ರಾತ್ರಿಯಿಡೀ ಅಮಾನವೀಯವಾಗಿ ಚಿತ್ರಹಿಂಸೆಗೊಳಪಡಿಸಿದ್ದಲ್ಲದೆ, ಅವರ ಕಿರುಚಾಟ ಯಾರಿಗೂ ಕೇಳದಂತೆ ದೊಡ್ಡದಾಗಿ ಸೌಂಡ್ ಸಿಸ್ಟಮ್ ಬಳಸಿದ್ದರು ಎಂಬ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದವು. ಪೊಲೀಸರು ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ದಾಖಲೆಗಳನ್ನು ತಿದ್ದಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು. ನ್ಯಾಯಾಧೀಶರು ಈ ಪ್ರಕರಣವನ್ನು “ಅಪರೂಪದಲ್ಲೇ ಅಪರೂಪದ” ಎಂದು ವರ್ಗೀಕರಿಸಲು ಪ್ರಮುಖ ಕಾರಣವೆಂದರೆ, ನಾಗರಿಕರನ್ನು ರಕ್ಷಿಸಬೇಕಾದವರೇ ಭಕ್ಷಕರಾಗಿ ವರ್ತಿಸಿದ್ದು. ಒಂಬತ್ತು ಮಂದಿ ಪೊಲೀಸ್ ಅಧಿಕಾರಿಗಳಿಗೆ ಒಂದೇ ಬಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದ್ದು, ಇದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದೆ. ಈ ತೀರ್ಪು ಪೊಲೀಸ್ ಠಾಣೆಗಳಲ್ಲಿ ನಡೆಯುವ ಕಸ್ಟೋಡಿಯಲ್ ಟಾರ್ಚರ್ ಅಥವಾ ಪೊಲೀಸ್ ವಶದಲ್ಲಿನ ಹಿಂಸೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.




