ಟಾಲಿವುಡ್ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕುಟಂಬಕ್ಕೆ ಇತ್ತೀಚೆಗೆ ಒಂದು ಸಮಸ್ಯೆ ಎದುರಾಗಿತ್ತು. ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ. ಸಿಂಗಾಪುರದಲ್ಲಿ ಸಂಭವಿಸಿದ ಈ ಘಟನೆಯಿಂದ 8 ವರ್ಷದ ಮಾರ್ಕ್ ಶಂಕರ್ಗೆ ಸುಟ್ಟ ಗಾಯಗಳಾದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಗ್ನಿ ಅವಘಡ ಸಂಭವಿಸಿದಾಗ ಪವನ್ ಕಲ್ಯಾಣ್ ಕುಟುಂಬಕ್ಕೆ ನರೇಂದ್ರ ಮೋದಿ ಸಹಾಯ ಮಾಡಿದ್ದರು. ಅದಕ್ಕಾಗಿ ಈಗ ಪವನ್ ಕಲ್ಯಾಣ್ ಅವರು ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಧನ್ಯವಾದ ತಿಳಿಸಿದ್ದಾರೆ.
‘ನನ್ನ ಮಗ ಮಾರ್ಕ್ ಶಂಕರ್ ಸಿಂಗಾಪುರದ ಬೇಸಿಗೆ ಶಿಬಿರದಲ್ಲಿ ಇದ್ದಾಗ ಅಗ್ನಿ ಅವಘಡ ಸಂಭವಿಸಿತು. ಆ ವೇಳೆ ಸಹಾಯ ಮಾಡಿದ್ದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ಕೂಡ ಸ್ಪಂದಿಸಿತು’ ಎಂದು ಪವನ್ ಕಲ್ಯಾಣ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಚೇತರಿಸಿಕೊಳ್ಳುತ್ತಿರುವ ಮಾರ್ಕ್ ಶಂಕರ್ನನ್ನು ಸಿಂಗಾಪುರದಿಂದ ಹೈದರಾಬಾದ್ಗೆ ಕರೆದುಕೊಂಡು ಬರಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿವೆ. ಮಗನನ್ನು ಪವನ್ ಕಲ್ಯಾಣ್ ಅವರು ಎತ್ತಿಕೊಂಡು ಬಂದಿದ್ದಾರೆ. ಮಾರ್ಕ್ ಶಂಕರ್ ಇನ್ನೂ ಚೇತರಿಸಿಕೊಳ್ಳುವುದು ಬಾಕಿ ಇದೆ. ಆತ ಬೇಗ ಗುಣಮುಖನಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.