#Exclusive NewsTop Newsರಾಜ್ಯಸುದ್ದಿ

ಮೈಸೂರು ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಯದುವೀರ್‌ ಆಕ್ಷೇಪ

ಮೈಸೂರು: ಇಬ್ಬರು ಮಹಾರಾಣಿಯರು ಹಾಗೂ ಚಾಮರಾಜ ಒಡೆಯರ್‌ ಸ್ಮರಣಾರ್ಥ ಮೈಸೂರಿನಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್‌)ಗೆ ತೆರಳುವ ಮಾರ್ಗಕ್ಕೆ ಪ್ರಿನ್ಸಸ್‌ ರಸ್ತೆ (ರಾಜಕುಮಾರಿ ರಸ್ತೆ) ಎಂದು ಹೆಸರಿಸಲಾಗಿದೆ. ಹಾಗಾಗಿ, ಈ ಇತಿಹಾಸ ಪ್ರಸಿದ್ಧ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ವೆಂದು ಮರು ನಾಮಕರಣ ಮಾಡದೇ ಪರಂಪರೆಯನ್ನು ಉಳಿಸಬೇಕು ಎಂದು ಮೈಸೂರು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದ್ದಾರೆ.

”ಮೈಸೂರು ಸಂಸ್ಥಾನದ ಪೂರ್ವಜರ ಹೆಸರು ಇರುವ ರಸ್ತೆಗೆ ಈ ರೀತಿಯಲ್ಲಿ ಹೆಸರು ಬದಲಿಸಲು ಹೊರಟಿರುವ ವಿಚಾರದಿಂದ ತಮಗೆ ನೋವುಂಟಾಗಿದೆ. ಪ್ರಿನ್ಸಸ್‌ ರಸ್ತೆ ಕೇವಲ ಮಾರ್ಗದ ಹೆಸರಾಗಿರದೇ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದೆ,” ಎಂದು ಅವರು ವಿವರಿಸಿದರು.

“ಚಾಮರಾಜ ಒಡೆಯರ್‌ ಅವರ ಇಬ್ಬರು ಪುತ್ರಿಯರಲ್ಲಿ ಮಹಾರಾಣಿ ಕೃಷ್ಣಜಮ್ಮಣ್ಣಿ ಅವರು ತಮ್ಮ ಹೆಸರಿನಲ್ಲಿ ಇದೇ ರಸ್ತೆಯಲ್ಲಿ ಪಿ.ಕೆ. ಸ್ಯಾನಿಟೋರಿಯಂ ಆಸ್ಪತ್ರೆ ನಿರ್ಮಿಸಿದ್ದಾರೆ. ಮತ್ತೊಬ್ಬ ಪುತ್ರಿ ಮಹಾರಾಣಿ ಚೆಲುವಾಜಮ್ಮಣ್ಣಿ ಅವರು ವಾಸವಿದ್ದ ಚೆಲುವಾಂಬ ಅರಮನೆ (ಇಂದಿನ ಸಿಎಫ್‌ಟಿಆರ್‌ಐ) ಕೂಡ ಇದೇ ರಸ್ತೆ ಬಳಿಯೇ ನಿರ್ಮಾಣವಾಗಿದೆ. ಈ ರೀತಿ ರಾಜವಂಶಸ್ಥರ ಕೊಡುಗೆಯ ಸ್ಮರಣಾರ್ಥವಾಗಿ ಈ ರಸ್ತೆಗೆ ಪ್ರಿನ್ಸಸ್‌ ರಸ್ತೆ ಎಂದು ಹೆಸರಿಡಲಾಗಿದೆ. ಇದೊಂದು ಐತಿಹಾಸಿಕ ಮೈಲುಗಲ್ಲಾಗಿದ್ದು, ಇದನ್ನು ಮುಂದಿನ ಪೀಳಿಗೆಗೂ ಉಳಿಸಬೇಕಿದೆ. ಹಾಗಾಗಿ, ಈ ರಸ್ತೆಗೆ ಇದೇ ಹೆಸರನ್ನು ಉಳಿಸಿಕೊಳ್ಳಬೇಕಿದೆ,” ಎಂದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

“ಮೈಸೂರು ಅರಸರ ದೂರದೃಷ್ಟಿಯಿಂದ ಹಳೇ ಮೈಸೂರು ಭಾಗ ಅಭಿವೃದ್ಧಿಯಾಗಿದೆ. ಆ ರಸ್ತೆಯ ಹೆಸರು ಬದಲಿಸುವ ಬದಲು ಬೇರೆ ಅನೇಕ ರಸ್ತೆಗಳಿದ್ದು, ಅವುಗಳಲ್ಲಿ ಒಂದನ್ನು ಗುರುತಿಸಿ ಹೆಸರಿಟ್ಟುಕೊಳ್ಳಲಿ,” ಎಂದು ಸಂಸದರು ಸಲಹೆ ನೀಡಿದರು.

ಪ್ರತಾಪ್‌ ಸಿಂಹ ಬೆಂಬಲ

“ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಸೈದ್ಧಾಂತಿಕವಾಗಿ ನಾನು ಅವರನ್ನು ವಿರೋಧಿಸುತ್ತೇನೆ. ಆದರೆ, ಈ ವಿಚಾರದಲ್ಲಿ ವಿರೋಧಿಸುವುದಿಲ್ಲ. ಸ್ಪಷ್ಟ ಬಹುಮತದ ಜತೆ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮೈಸೂರಿಗೆ ಅವರ ಕೊಡುಗೆ ಅಪಾರ. ಜಯದೇವ ಆಸ್ಪತ್ರೆ ಕಟ್ಟಡ, ಸೂಪರ್‌ ಸ್ಪೆಧಿಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದು ಸಿದ್ದರಾಮಯ್ಯ. ರಾಜಪಥ ಮಾಡಿಸಿದ್ದು ಸಿದ್ದರಾಮಯ್ಯ. ಈ ವಿಚಾರದಲ್ಲಿ ತಕಾರರು ಎತ್ತಿದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಆಗುತ್ತದೆ,’’ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಇಬ್ಬರು ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button