ಬೆಂಗಳೂರು : ಹಲವು ಅಕ್ರಮಗಳ ಮೂಲಕ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಿದ್ದ ಕೃಷ್ಣ ಜಲಭಾಗ್ಯ ನಿಗಮ(KBJNL)ದ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೆ ಸಿಟ್ಟು ಹೊರಹಾಕಿದ್ದಾರೆ. ಡಿಸೆಂಬರ್ 26 ರಂದು ನಡೆದಿರುವ ನೀರಾವರಿ ನಿಗಮಗಳ ಬೋರ್ಡ್ ಮೀಟಿಂಗ್ ನಲ್ಲಿ KBJNL ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಬರೋಬ್ಬರಿ1000 ಕೋಟಿ ಕಾಮಗಾರಿ ಟೆಂಡರ್ ಗೆ ಅನುಮೋದನೆ ಪಡೆಯಲು ಮುಂದಾಗಿದ್ದ ಅಧಿಕಾರಿಗಳಿಗೆ ಈ ಮೂಲಕ ತಫರಾಕಿ ಬಿದ್ದಿದೆ. ಈಗಾಗಲೇ ನಿಯಮಬಾಹಿರವಾಗಿ ನೂರಾರು ಕೋಟಿ ಟೆಂಡರ್ ಕರೆಯಲಾಗಿದೆ.

ಭಾರಿ ಪ್ರಮಾಣದ ಬಿಲ್ ಗಳು ಪೆಂಡಿಂಗ್ ಇವೆ. ಜತೆಗೆ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಸರಿಯಾದ ಪರಿಶೀಲನೆ ನಡೆಸದೆ ಬಿಲ್ ಪಾವತಿ ಮಾಡಲಾಗಿದೆ. ಇದೆಲ್ಲದರ ಮಧ್ಯೆ ನಿನ್ನೆಯ ಬೋರ್ಡ್ ಮೀಟಿಂಗ್ ನಲ್ಲಿ ಮತ್ತೆ 1000 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಅಧಿಕಾರಿಗಳು ಕಡತ ಮಂಡಿಸಿದ್ದರು. ಇದನ್ನು ಗಮನಿಸಿದ ಸಿಎಂ ಅವರು ನಿಗಮದ ಅಧಿಕಾರಿಗಳಿಗೆ ಗದರಿದ್ದಾರೆ. ಮಧ್ಯೆ ಪ್ರವೇಶಿಸಿ ಅಪ್ರೂವ್ ಮಾಡೋಣ ಸರ್ ಎಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾತನ್ನೂ ಸಿಎಂ ಕೇಳಲಿಲ್ಲ ಎಂದು ಮೂಲಗಳು ತಿಳಿಸಿವೆ. ಕೇವಲ R&R ಗೆ ಸಂಬಂಧಿಸಿದ ಕಡತಕ್ಕೆ ಸಭೆ ಅನುಮೋದನೆ ನೀಡಿದೆ.

ಸೀನಿಯಾರಿಟಿ ಉಲ್ಲಂಘಿಸಿ ಲಾಬಿ ಮೂಲಕ KNNL ಎಂಡಿ ಹುದ್ದೆ ಪಡೆದಿದ್ದಾರೆಂಬ ಟೀಕೆಗೆ ಗುರಿಯಾಗಿದ್ದ ಚೀಫ್ ಎಂಜಿನಿಯರ್ ರಾಜೇಶ್ ಅಮ್ಮಿನಭಾವಿ ಅವರೇ KBJNL ಪ್ರಭಾರಿ ಎಂ.ಡಿ. ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಕಲಿ ಎಸ್ಟಿಮೇಟ್, ಕಳಪೆ ಕಾಮಗಾರಿ, ಡೂಪ್ಲಿಕೇಟ್ ಬಿಲ್, ಭ್ರಷ್ಟಾಚಾರಕ್ಕಾಗಿಯೇ EFI ಫೈಲ್ ಅನುಮೋದಿಸುವ ಮೂಲಕ ನಿಗಮ ಸುದ್ದಿಯಲ್ಲಿರುವುನ್ನು ಸ್ಮರಿಸಬಹುದು.

ಇನ್ನು ಈ ಬೋರ್ಡ್ ಮೀಡಿಂಗ್ ನಲ್ಲಿ ಕರ್ನಾಟಕ ನೀರಾವರಿ ನಿಗಮದ ಮೂರು ಸಾವಿರ ಕೋಟಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಮೇಂಟೆನೆನ್ಸ್ ಹೆಸರಲ್ಲಿ ನಡೆಯುವ ಅಧ್ವಾನಗಳಿಗೆ ಕಡಿವಾಣ ಹಾಕಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೂ ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.