ಚಿಕ್ಕಬಳ್ಳಾಪುರ: ವಕ್ಫ್ ಆಸ್ತಿ ಒತ್ತುವರಿ ವಿವಾದವನ್ನು ಖಂಡಿಸಿ ಚಿಕ್ಕಬಳ್ಳಾಪುರ ಬಿಜೆಪಿ ಘಟಕವು ವಿಪಕ್ಷ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿಂದು ʻನಮ್ಮ ಭೂಮಿ ನಮ್ಮ ಹಕ್ಕುʼ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು. ನಗರದ ಬಿಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಸದ ಸುಧಾಕರ್ ಸೇರಿದಂತೆ ಮಾಜಿ ಸಂಸದ ಮುನಿಸ್ವಾಮಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.
ಇದಕ್ಕೂ ಮುನ್ನ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ಸಮಾಧಿಗೆ ಅಶೋಕ್ ಪುಷ್ಪನಮನ ಸಲ್ಲಿಸಿದರು. ನಂತರ ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ದಿ.ಸರ್ ಎಂ.ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿದ್ದ ಕಂದವಾರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ವಕ್ಫ್ ಆಸ್ತಿಯನ್ನಾಗಿ ಮಾಡಿದ್ದ ಪ್ರಕರಣ ಸಂಬಂಧ ಸಂಸದ ಸುಧಾಕರ್ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಶಾಲಾ ಆವರಣದಲ್ಲೇ ದರ್ಗಾ ಇರುವುದು, ಹಸಿರು ಭಾವುಟ ಹಾರುತ್ತಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಅಶೋಕ್ ಕೆಂಡಾಮಂಡಲರಾದರು.
ವಿಶ್ವೇಶ್ವರಯ್ಯನವರು ಓದಿದ ಶಾಲೆ 100 ವರ್ಷಗಳಿಗಿಂತಲೂ ಹಳೆಯ ಶಾಲೆ, ಇಲ್ಲಿ ದರ್ಗಾ ಬರಲು ಹೇಗೆ ಸಾಧ್ಯ? ಶಾಲಾ ಆವರಣದಲ್ಲಿ ತ್ರಿವರ್ಣ ಧ್ವಜ ಇರಬೇಕಾದ ಜಾಗದಲ್ಲಿ ಹಸಿರು ಭಾವುಟ ಇದ್ರೆ ಹೇಗೆ? ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ರೆ ಮಕ್ಕಳು ಶಾಲೆಯಲ್ಲಿ ಪಾಠ ಕೇಳೋದು ಹೇಗೆ? ಅಂತ ಖಾರವಾಗಿಯೇ ಕಿಡಿಕಾರಿದರು.
ಅಂದಹಾಗೆ ಕಂದವಾರ ಸರ್ಕಾರಿ ಶಾಲೆಯ 19 ಗುಂಟೆ ಆಸ್ತಿಯನ್ನ ದರ್ಗಾ ಷಾ ವಾಲೀ ಸುನ್ನಿ ವಕ್ಫ್ ಆಂತ ಪಹಣಿ ಬದಲಾವಣೆ ಮಾಡಲಾಗಿತ್ತು. ʻಪಬ್ಲಿಕ್ ಟಿವಿʼ ವರದಿ ನಂತರ ಎಚ್ಚೆತ್ತ ಜಿಲ್ಲಾಡಳಿತ ಮರಳಿ ಶಾಲಾ ಆಸ್ತಿಯೆಂದು ಪಹಣಿಯಲ್ಲಿ ಬದಲಾವಣೆ ಮಾಡಿತ್ತು. ಈಗ ಶಾಲಾ ಆವರಣದಲ್ಲಿರುವ ಹಸಿರು ಭಾವುಟವನ್ನ 15 ದಿನಗಳ ಒಳಗಾಗಿ ತೆರವು ಮಾಡಿ. ಇಲ್ಲವಾದರೇ ನಾವೇ ಬಂದು ತೆರವು ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದರು.