ಬೆಂಗಳೂರು: ಎನ್ಡಿಎ ಸರ್ಕಾರ ಇಂದು ಮಂಡಿಸಲಿರುವ ವಕ್ಫ್ ತಿದ್ದುಪಡಿ ಬಿಲ್ ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ತಿರುಪತಿಯಲ್ಲೂ ಅನ್ಯಧರ್ಮದವರನ್ನು ನೇಮಿಸ್ತಾರಾ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಈಗ ಮಂಡಿಸುತ್ತಿರುವ ವಕ್ಫ್ ತಿದ್ದುಪಡಿ ಬಿಲ್ ನಲ್ಲಿ ವಕ್ಫ್ ಮಂಡಳಿಯಲ್ಲಿ ಇಬ್ಬರು ಅನ್ಯಧರ್ಮೀಯರೂ ಇರಲಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ಈ ಮೊದಲಿನಿಂದಲೂ ಆಕ್ಷೇಪವೆತ್ತುತ್ತಲೇ ಇದೆ. ಮುಸ್ಲಿಮರೂ ಈ ಅಂಶದ ಬಗ್ಗೆ ತಗಾದೆ ತೆಗೆದಿದ್ದಾರೆ.
ಈ ಮಾತನಾಡಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್, ‘ಹಾಗಿದ್ದರೆ ಕೇಂದ್ರ ಸರ್ಕಾರ ತಿರುಪತಿಯಲ್ಲೂ ಅನ್ಯಧರ್ಮೀಯದ ಅಧಿಕಾರಿಗಳನ್ನು ನೇಮಕ ಮಾಡ್ತಾರಾ? ವಕ್ಫ್ ಮಂಡಳಿ ಎನ್ನುವುದು ಮುಸ್ಲಿಮರ ವೈಯಕ್ತಿಕ ಮಂಡಳಿ. ಅಲ್ಲಿ ಅವರ ಧರ್ಮದ ಆಚರಣೆಗೆ ಅವಕಾಶ ಕೊಡಬೇಕು. ಅಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು. ಇದು ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಿದಂತೆ’ ಎಂದಿದ್ದಾರೆ.
‘ದೇಶದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ. ಅದನ್ನು ಪರಿಹರಿಸುವ ಬದಲು ಜನರ ಗಮನ ಬೇರೆ ಕಡೆ ಸೆಳೆಯಲು ವಕ್ಫ್ ತಿದ್ದುಪಡಿಗೆ ಕೇಂದ್ರ ಕೈ ಹಾಕಿದೆ. ಈಗಾಗಲೇ ಮನಮೋಹನ್ ಸಿಂಗ್ ಸರ್ಕಾರವಿದ್ದಾಗಲೇ ವಕ್ಫ್ ಬಿಲ್ ಗೆ ತಿದ್ದುಪಡಿ ತಂದು ಸಾಕಷ್ಟು ಸರಳೀಕರಣಗೊಳಿಸಿದ್ದಾರೆ. ಈಗ ಮೋದಿ ಸರ್ಕಾರ ಇಂತಹದ್ದೊಂದು ಬಿಲ್ ತರುವ ಅಗತ್ಯವೇ ಇರಲಿಲ್ಲ’ಎಂದಿದ್ದಾರೆ.


