ಬೆಂಗಳೂರು : ವರ್ತೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗಾನಂದ್ ಅವರು ರೌಡಿಶೀಟರ್ಗಳೊಂದಿಗೆ ಕೈಜೋಡಿಸಿ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಕೊಲೆ ಪ್ರಕರಣವನ್ನು ಹಳ್ಳ ಹಿಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2024ರ ಸೆಪ್ಟೆಂಬರ್ನಲ್ಲಿ ನಡೆದ ಈ ಭೀಕರ ಹತ್ಯೆಯ ತನಿಖೆಯಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ 90 ದಿನಗಳೊಳಗೆ ಚಾರ್ಜ್ಶೀಟ್ ಸಲ್ಲಿಸದ ಕಾರಣ, ಪ್ರಮುಖ ಆರೋಪಿ ರೇವಾ ಸೇರಿದಂತೆ ಏಳು ಮಂದಿ ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ. ನ್ಯಾಯಾಲಯದ ಆದೇಶದಂತೆ ಆರೋಪಿ ಪ್ರತಿದಿನ ಠಾಣೆಗೆ ಬಂದು ಸಹಿ ಹಾಕಬೇಕಿದ್ದರೂ, ಇನ್ಸ್ಪೆಕ್ಟರ್ ಪ್ರಭಾವದಿಂದ ಪೊಲೀಸರೇ ಆರೋಪಿಯ ಅಪಾರ್ಟ್ಮೆಂಟ್ಗೆ ಹೋಗಿ ಸಹಿ ಪಡೆದಿದ್ದಾರೆ ಎನ್ನಲಾಗಿದೆ.
ಸಾಕ್ಷಿಗಳಿಗೆ ಮತ್ತು ಸಂತ್ರಸ್ತ ಕುಟುಂಬಕ್ಕೆ ರೌಡಿಗಳಿಂದ ಜೀವ ಬೆದರಿಕೆ ಇದ್ದರೂ ರಕ್ಷಣೆ ನೀಡದ ಇನ್ಸ್ಪೆಕ್ಟರ್ ವರ್ತನೆಯಿಂದ ಕಂಗಾಲಾಗಿರುವ ರೇವಂತ್ ಪೋಷಕರು, ಉನ್ನತ ಮಟ್ಟದ ತನಿಖೆ ಹಾಗೂ ನ್ಯಾಯಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ.


