
ಪಾಟ್ನಾ: ಯುಪಿಎಸ್ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆದಿರುವುದಾಗಿ ಸುಳ್ಳು ಹೇಳಿಕೊಂಡಿದ್ದ ಬಿಹಾರದ ಶೇಖ್ಪುರ ಜಿಲ್ಲೆಯ ರಂಜಿತ್ ಯಾದವ್ ಎಂಬಾತ ಈಗ ಪೊಲೀಸರಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದಾನೆ.
ಪರೀಕ್ಷಾ ಫಲಿತಾಂಶ ಬಂದಾಗ ರಂಜಿತ್ ತನ್ನ ಸಾಧನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದನು. ಇದನ್ನು ನಂಬಿದ ಮಾಜಿ ಶಾಸಕ ವಿಜಯ್ ಸಾಮ್ರಾಟ್ ಮತ್ತು ಸ್ಥಳೀಯ ಪೊಲೀಸರು ಆತನ ಮನೆಗೆ ಭೇಟಿ ನೀಡಿ ಅದ್ಧೂರಿಯಾಗಿ ಸನ್ಮಾನಿಸಿದ್ದರು. ಆದರೆ, ಮರುಪರಿಶೀಲಿಸಿದಾಗ ನಿಜವಾದ 440ನೇ ರ್ಯಾಂಕ್ ವಿಜೇತರು ಕರ್ನಾಟಕದ ಅಭ್ಯರ್ಥಿ ಎಂದು ತಿಳಿದುಬಂದಿದೆ.
ಸತ್ಯಾಂಶ ಹೊರಬರುತ್ತಿದ್ದಂತೆ ರಂಜಿತ್ ಯಾದವ್ ಗ್ರಾಮದಿಂದ ಪರಾರಿಯಾಗಿದ್ದಾನೆ. ಸಾರ್ವಜನಿಕರನ್ನು ಮತ್ತು ಅಧಿಕಾರಿಗಳನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ಪೊಲೀಸರು ಈಗ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸುಳ್ಳು ಪ್ರತಿಷ್ಠೆಗಾಗಿ ಸನ್ಮಾನ ಸ್ವೀಕರಿಸಿದ್ದ ಈ ನಕಲಿ ವಿಜೇತನ ಕೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.




