ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ, 5 ಸಲ ಚಾಂಪಿಯನ್ ಆಗಿರುವ ಭಾರತ ತಂಡ ಈಗಾಗಲೇ ಫೈನಲ್ ಪ್ರವೇಶಿಸಿದೆ. ಮಂಗಳವಾರ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೆಡವಿ ಫೈನಲ್ಗೆ ಲಗ್ಗೆಯಿಟ್ಟಿತ್ತು. ಫೈನಲ್ನಲ್ಲಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ಎದುರಾಗುವ ಸಾಧ್ಯತೆ ಇದೆ.
6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಮೊದಲ ಸಲ ಅಂಡರ್-19 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು 2002 ರಲ್ಲಿ. ಮೊಹ್ಮಮದ್ ಕೈಫ್ ನಾಯಕತ್ವದಲ್ಲಿ ಭಾರತಕ್ಕೆ ಚೊಚ್ಚಲ ಅಂಡರ್-19 ವಿಶ್ವಕಪ್ ಕಪ್ ದೊರಕಿತ್ತು. ಆ ಬಳಿಕ 2008, 2012, 2018 ಮತ್ತು 2022ರಲ್ಲಿ ಪ್ರಶಸ್ತಿ ಎತ್ತಿತ್ತು. ಈ ಬಾರಿಯೂ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿದೆ.
ಭಾರತ ಉತ್ತಮ ಆಲ್ರೌಂಡರ್ಗಳನ್ನೊಳಗೊಂಡ ಸಶಕ್ತ ಪಡೆಯನ್ನು ಹೊಂದಿದೆ. ಮಹಾರಾಷ್ಟ್ರದ ಸವ್ಯ ಸಾಚಿ ಅರ್ಶಿನ್ ಕುಲಕರ್ಣಿ, ವಿಕೆಟ್ ಕೀಪರ್-ಬ್ಯಾಟರ್ ಎ. ಅವನೀಶ್ ರಾವ್, ಎಡಗೈ ಸ್ಪಿನ್ನರ್-ಉಪನಾಯಕ ಸೌಮಿ ಕುಮಾರ್ ಪಾಂಡೆ, ನಾಯಕ ಉದಯ್ ಸಹಾರಣ್, ಮುಂಬಯಿಯ ಮುಶೀರ್ ಖಾನ್, ಸಚಿನ್ ದಾಸ್ ಅವರೆಲ್ಲ ತಂಡದ ಸ್ಟಾರ್ ಬ್ಯಾಟರ್ ಹಾಗೂ ಆಲ್ರೌಂಡರ್ಗಳು. ಇವರಲ್ಲಿ ಅರ್ಶಿನ್ ಕುಲಕರ್ಣಿ ಮತ್ತು ಅವನೀಶ್ ರಾವ್ ಈಗಾಗಲೇ ಐಪಿಎಲ್ ತಂಡ ಗಳಿಂದಲೂ ಕರೆ ಪಡೆದಿದ್ದಾರೆ.
ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ಭಾರತ ತಂಡದ ಆಟಗಾರರೆ ಪಡೆದಿದ್ದಾರೆ. ಉದಯ್ ಸಹಾರಣ್(389) ಮೊದಲ ಸ್ಥಾನದಲ್ಲಿದ್ದರೆ,ಮುಶೀರ್ ಖಾನ್ (338) ಮತ್ತು ಸಚಿನ್ ದಾಸ್(294) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಟೇಕಿಂಗ್ನಲ್ಲಿ ಸೌಮಿ ಕುಮಾರ್ ಪಾಂಡೆ 17 ವಿಕೆಟ್ ಕಿತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಭಾರತ ಅಂಡರ್ 19 ತಂಡ ಈ ಹಿಂದಿನ ತಂಡಗಳಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ವೈವಿಧ್ಯಮಯವಾಗಿದೆ. ಫೈನಲ್ ಪಂದ್ಯದಲ್ಲಿಯೂ ಭಾರತ ಉತ್ತಮ ಪ್ರದರ್ಶನ ತೋರುವ ಮೂಲಕ 6ನೇ ಬಾಎರಿ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿ ಎನ್ನುವುದು ಭಾರತೀಯರ ಆಶಯ.