ಛತ್ತೀಸ್ಗಢ: ಅಪಘಾತದಲ್ಲಿ ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ-ತಾಯಿ, ಆ ನೋವು ತಡೆಯಲಾರದೆ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಕೃಷ್ಣ ಪಟೇಲ್ (48) ಮತ್ತು ರಮಾ ಬಾಯಿ (47) ಎಂದು ಗುರುತಿಸಲಾಗಿದೆ.
ಇವರ ಮಗ 21 ವರ್ಷದ ಆದಿತ್ಯ ಪಟೇಲ್, ಕೆಲವು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನು. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಕೃಷ್ಣ ಅವರಿಗೆ ಮಗನೇ ಪ್ರಪಂಚವಾಗಿದ್ದನು. ಮಗ ಹೋದ ಮೇಲೆ ಆ ದಂಪತಿ ಜೀವನದ ಆಸೆಯನ್ನೇ ಕಳೆದುಕೊಂಡಿದ್ದರು. ಸಾಯುವ ಮುನ್ನ ಅವರು ನಾಲ್ಕು ಪುಟಗಳ ಡೆತ್ ನೋಟ್ ಬರೆದಿದ್ದಾರೆ ಮತ್ತು ಒಂದು ವಿಡಿಯೋ ಕೂಡ ಮಾಡಿದ್ದಾರೆ.
ಅಪಘಾತ ನಡೆದ ದಿನ ಆದಿತ್ಯ ದೇವಸ್ಥಾನದ ಕೆಲಸಕ್ಕೆ ಹೋಗಲು ಹಿಂಜರಿದಿದ್ದನಂತೆ. ಆದರೆ ತಂದೆ ಕೃಷ್ಣ ಅವರೇ “ಇದು ದೇವರ ಕೆಲಸ, ಹೋಗಿ ಬಾ” ಎಂದು ಬಲವಂತ ಮಾಡಿ ಕಳುಹಿಸಿದ್ದರು. ಅಂದು ನಾನು ಕಳುಹಿಸಿದ್ದಕ್ಕೇ ಮಗ ಸತ್ತ ಎನ್ನುವ ಅಪರಾಧ ಪ್ರಜ್ಞೆ ತಂದೆಯನ್ನು ಬಹಳ ಕಾಡುತ್ತಿತ್ತು. ಅದೇ ಕೊರಗಿನಲ್ಲಿ ದಂಪತಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.


