ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಚುನಾವಣಾ ಅಖಾಡ ರಂಗೇರಿದೆ. ಇದರ ಬೆನ್ನಲ್ಲೇ ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ನಿನ್ನೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಕಾಂಗ್ರೆಸ್ ಸೇರ್ಪಡೆಗೊಂಡು ಚನ್ನಪಟ್ಟಣ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲು ಯೋಗೇಶ್ವರ್ ನಿರ್ಧರಿಸಿದ್ದರು, ಆದರೆ ಕೇಸರಿ ಪಕ್ಷದ ಹೈಕಮಾಂಡ್ ಅವರಿಗೆ ಈ ಸ್ಥಾನ ಜೆಡಿಎಸ್ಗೆ ಸೇರಿದ್ದು, ಕೇಂದ್ರ ಸಚಿವ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ನ ಚನ್ನಪಟ್ಟಣದಿಂದ ಗೆದ್ದಿದ್ದ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ಬಯಸಿದ್ದರು ಮತ್ತು ಯೋಗೇಶ್ವರ ಅವರ ಮನವೊಲಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಯೋಗೇಶ್ವರ್ ಅವರಿಗೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವಂತೆ ಕೇಂದ್ರ ಸಚಿವ ಹೆಚ್ .ಡಿ. ಕುಮಾರಸ್ವಾಮಿ ಆಫರ್ ನೀಡಿದ್ದರು. ಆದರೆ, ಅದನ್ನು ಯೋಗೇಶ್ವರ್ ತಿರಸ್ಕರಿಸಿದ್ದಾರೆ. ಹೀಗಾಗಿ ಯೋಗೇಶ್ವರ್ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಇದಕ್ಕನುಗುಣವಾಗಿಯೇ ಕಾಂಗ್ರೆಸ್ ಕೂಡ ರಣತಂತ್ರ ರೂಪಿಸುತ್ತಿದೆ.
ಯೋಗೇಶ್ವರ್, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆ ಡೀಲ್ ಮಾಡಿಕೊಂಡಿರುವ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ, ಯೋಗೇಶ್ವರ ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಸಮರ್ಥಿಸಿಕೊಂಡರು, ಆದರೆ ಕಾಂಗ್ರೆಸ್ ಯೋಗೇಶ್ವರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮನಸ್ಸು ಮಾಡಿರುವುದರಿಂದ ಅದು ಕುಮಾರಸ್ವಾಮಿ ಅವರಿಗೆ ಸಂಕಷ್ಟ ಎದುರಾಗಿದೆ.ಯೋಗೇಶ್ವರ್ ಕೂಡ ಕಾಂಗ್ರೆಸ್ ಆಫರ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಚನ್ನಪಟ್ಟಣದಿಂದ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಆಂತರಿಕ ಸಮೀಕ್ಷೆಗಳು ಅರಿತಿರುವುದರಿಂದ ಡಿ.ಕೆ. ಸುರೇಶ್ ಕಣಕ್ಕಿಳಿಸಲು ಕಾಂಗ್ರೆಸ್ ಮನಸ್ಸು ಮಾಡುತ್ತಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಯೋಗೇಶ್ವರ ಸರಾಸರಿ 40,000 ಮತಗಳನ್ನು ಗಳಿಸಬಹುದು ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ ಎಂದು ಹೇಳಲಾಗುತ್ತಿದೆ.
2013 ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ ಮುಸ್ಲಿಂ ಮತಗಳ ಸಹಾಯದಿಂದ ಗೆದ್ದಿದ್ದ ಯೋಗೇಶ್ವರ ಅವರು ಈ ಬಾರಿಯೂ ಸಮುದಾಯದ ಬೆಂಬಲ ಪಡೆಯಲಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.ಡಿ.ಕೆ. ಸುರೇಶ್ ಗೆಲುವು ಕಬ್ಬಿಣದ ಕಡಲೆ ಎಂದೂ ಹೇಳಲಾಗಿದೆ. ಹೀಗಾಗಿ ಯೋಗೇಶ್ವರ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಯೋಗೇಶ್ವರ ಅವರ ಈ ನಡೆ ಸೋಮವಾರ ಜೆಡಿಎಸ್ಗೆ ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಅವರ ರಾಜಕೀಯ ಭವಿಷ್ಯವನ್ನು ಪಣಕ್ಕಿಡಬೇಕೋ ಅಥವಾ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅಥವಾ ಸ್ಥಳೀಯ ಮುಖಂಡ ಜಯಮುತ್ತು ಅವರಿಗೆ ಟಿಕೆಟ್ ನೀಡಬೇಕೋ ಎಂಬ ಕುತೂಹಲ ಪಕ್ಷಕ್ಕೆ ಈಗ ಎದುರಾಗಿದೆ. ಕುಮಾರಸ್ವಾಮಿ ಮತ್ತು ನಿಖಿಲ್ ಸೋಮವಾರ ಸಂಜೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರನ್ನು ಭೇಟಿ ಮಾಡಿ ಕಾರ್ಯತಂತ್ರ ರೂಪಿಸಿದ್ದಾರೆ.