ಜಿಲ್ಲೆರಾಜಕೀಯರಾಜ್ಯ

ಜನಾಕ್ರೋಶಕ್ಕೆ ಮಣಿದ ಸಾರಿಗೆ ಇಲಾಖೆ; ಕೋಟಿ ಆದಾಯ ಲೆಕ್ಕಿಸದೆ ಪೋಸ್ಟರ್ ತೆರವಿಗೆ ಆದೇಶ!

ಸರ್ಕಾರಿ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುತ್ತಿದ್ದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿದ್ದ ತೀವ್ರ ಆಕ್ರೋಶಕ್ಕೆ ಕೊನೆಗೂ ಜಯ ಸಿಕ್ಕಿದೆ. ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ವಿಮಲ್ ಹಾಗೂ ಇತರ ತಂಬಾಕು ಬ್ರ್ಯಾಂಡ್‌ಗಳ ಪೋಸ್ಟರ್‌ಗಳನ್ನು ಹಾಕಿದ್ದನ್ನು ವಿರೋಧಿಸಿ ರಾಜ್ಯಾದ್ಯಂತ ಜನರು ಸ್ವಯಂಪ್ರೇರಿತರಾಗಿ ಪೋಸ್ಟರ್‌ಗಳನ್ನು ಕಿತ್ತೆಸೆಯುವ ಮೂಲಕ ಆಂದೋಲನ ನಡೆಸಿದ್ದರು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಜಾಹೀರಾತುಗಳು ಸರ್ಕಾರಿ ವಾಹನಗಳ ಮೇಲೆ ಇರುವುದು ಸರಿಯಲ್ಲ ಎಂಬ ಕೂಗು ಬಲವಾಗುತ್ತಿದ್ದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ.

ರಾಜ್ಯದ ಸುಮಾರು 2,000ಕ್ಕೂ ಹೆಚ್ಚು ಬಸ್‌ಗಳ ಮೇಲೆ ಅಳವಡಿಸಲಾಗಿದ್ದ ಇಂತಹ ಎಲ್ಲಾ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಮುಂದಿನ 15 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸುವಂತೆ ಸಚಿವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಆಯಾ ಡಿಪೋಗಳ ಮ್ಯಾನೇಜರ್‌ಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಜಾಹೀರಾತು ಏಜೆನ್ಸಿಗಳೊಂದಿಗೂ ಮಾತುಕತೆ ನಡೆಸಿ ಪ್ರಕ್ರಿಯೆ ಆರಂಭಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡ ಈ ನಿರ್ಧಾರದಿಂದ ಸಂಸ್ಥೆಗೆ ವಾರ್ಷಿಕವಾಗಿ ಬರುತ್ತಿದ್ದ ಸುಮಾರು 60 ಕೋಟಿ ರೂಪಾಯಿ ಆದಾಯಕ್ಕೆ ಕೊಕ್ ಬೀಳಲಿದೆ.

ಬಸ್‌ಗಳ ಮೇಲೆ ರಾರಾಜಿಸುತ್ತಿದ್ದ ಪಾನ್ ಮಸಾಲಾ ಮತ್ತು ತಂಬಾಕು ಪ್ರೇರಿತ ಜಾಹೀರಾತುಗಳಿಂದ ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಆತಂಕ ಪೋಷಕರಲ್ಲಿತ್ತು. ಈಗ ಸಚಿವರ ಆದೇಶದ ಬೆನ್ನಲ್ಲೇ ಡಿಪೋಗಳಲ್ಲಿ ಜಾಹೀರಾತು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಶೀಘ್ರದಲ್ಲೇ ಬಸ್‌ಗಳು ಈ ಪೋಸ್ಟರ್‌ಗಳಿಂದ ಮುಕ್ತವಾಗಲಿವೆ.

ಸಾರ್ವಜನಿಕ ಸಂಘಟನೆಗಳು ಮತ್ತು ಪ್ರಜ್ಞಾವಂತ ನಾಗರಿಕರು ನಡೆಸಿದ ಈ ಕಿರು ಹೋರಾಟವು ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂದೆ ಸಾರಿಗೆ ಸಂಸ್ಥೆಯು ಇಂತಹ ಹಾನಿಕಾರಕ ಉತ್ಪನ್ನಗಳ ಪ್ರಚಾರಕ್ಕೆ ಅವಕಾಶ ನೀಡಬಾರದು ಎಂಬುದು ಜನರ ಆಶಯವಾಗಿದೆ. #TobaccoFree

Comments (0)

Your email address will not be published. Required fields are marked *

Back to top button