ಬೆಂಗಳೂರು: ರಾಜ್ಯದಲ್ಲಿ ಬಸ್, ಮೆಟ್ರೋ ಟಿಕೆಟ್ ದರ ಏರಿಕೆಗೆ ಸಿಲುಕಿ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಂದಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಜನಸಾಮಾನ್ಯರು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಈ ನಡುವೆ ಶಾಸಕರ ಸಂಬಳ ಹೆಚ್ಚಿಸಲು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ವಿಧಾನಸಭಾ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.
ಕಳೆದ ಬಾರಿ ನಡೆದ ಅಧಿವೇಶನ ವೇಳೆ ಶಾಸಕರ ಸಂಬಳ ಹೆಚ್ಚಿಸುವ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಅವರು ಗಮನ ಸೆಳೆದಿದ್ದರು. ಶಾಸಕರ ವೇತನ ಹೆಚ್ಚಳಕ್ಕೆ ಆಯೋಗ ಮಾಡಿ ಎಂದು ಬೆಲ್ಲದ್ ಒತ್ತಾಯಿಸಿದ್ದರು.
ರಾಜ್ಯ ಬಜೆಟ್ ಅಧಿವೇಶನದ ಪೂರ್ವದಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಶೇ.50ರಷ್ಟು ಸಂಬಳ ಹೆಚ್ಚಳ ಮಾಡಲು ಚರ್ಚಿಸಲಾಗಿದೆ. ಇದರ ಜೊತೆಗೆ ಬಿಎಸಿ ಸಭೆಯಲ್ಲಿ ಶಾಸಕರ ಕ್ಲಬ್ ಗೆ 20ಕೋಟಿ ರೂ. ಅನುದಾನ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.
ಸದ್ಯ ಶಾಸಕರ ವೇತನ ಏಷ್ಟಿದೆ?
* ವೇತನ – 40,000 ರೂ.
* ಕ್ಷೇತ್ರ ಭತ್ಯೆ – 60,000 ರೂ.
* ಪ್ರಯಾಣ ಭತ್ಯೆ – 60,000 ರೂ
* ಆಪ್ತ ಸಹಾಯಕರ ವೇತನ – 20,000 ರೂ.
* ದೂರವಾಣಿ ವೆಚ್ಚ – 20,000 ರೂ.
* ಅಂಚೆ ವೆಚ್ಚ – 5000 ರೂ
* ಒಟ್ಟು ಮೊತ್ತ – 2,05,000 ರೂ.