ಚನ್ನಪಟ್ಟಣ : ರೈತರಿಗೆ, ಜನರಿಗೆ, ಜಾನುವಾರುಗಳಿಗೆ ಉಪಯೋಗವಾಗಲಿ ಎಂದು ಸಿ.ಪಿ.ಯೋಗೇಶ್ವರ್ ಅವರು ಕ್ಷೇತ್ರದ ಕೆರೆಗಳನ್ನು ತುಂಬಿಸಿದರು. ಬೇರೆಯವರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕಣ್ಣೀರಿನಿಂದ ಕೆರೆಗಳನ್ನು ತುಂಬಿಸುತ್ತಿದ್ದಾರೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದ ಬೇವೂರಿನಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಬಿಜೆಪಿ ಮತ್ತು ದಳದ ನಾಯಕರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕ್ಷೇತ್ರದ ಉದ್ದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಜನ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯ ಮಾಡಿದ್ದಾರೆಯೇ? ಇವರಿಗೆ ಅನ್ಯಾಯ ಮಾಡಿದವರು ಯಾರು? ಯಾರಿಗೆ ಅನ್ಯಾಯವಾಗಿದೆ ಎಂಬುದು ಜನರಿಗೆ ತಿಳಿದಿದೆ” ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ, ಚನ್ನಪಟ್ಟಣ ನಾಡು ಚಿನ್ನದ ನಾಡಾಗುತ್ತದೆ ಎಂದು ಕ್ಷೇತ್ರದ ಜನರು ದೂರದ ಬೆಟ್ಟ ನುಣ್ಣಗಿದೆ ಎಂದು ನಂಬಿದರು. ಇದರಿಂದ ರೈತರ ಬದುಕನ್ನು ಹಸನು ಮಾಡಿದ, ಕೆರೆಗಳನ್ನು ತುಂಬಿಸಿದ ಯೋಗೀಶ್ವರ್ ಅವರಿಗೆ ಅನ್ಯಾಯವಾಗಿದೆ” ಎಂದರು.
ನಿಮ್ಮ ಕಣ್ಣೀರನ್ನು ಒರೆಸಬೇಕು ಎಂದುಕೊಂಡಿದ್ದ ಯೋಗೇಶ್ವರ್ ಅವರಿಗೆ ಎರಡು ಬಾರಿ ಅನ್ಯಾಯವಾಗಿದೆ. ನಾವು ರೈತರಿಗೆ ಕರೆಂಟ್ ಕೊಟ್ಟೆವು. ನಮ್ಮ ಮುಖಂಡರು ಚನ್ನಪಟ್ಟಣ ಇಷ್ಟೊಂದು ಹಸಿರಾಗಿದೆಯಲ್ಲ ಎಂದು ಕೇಳಿದರು. ಅದಕ್ಕೆ ನಾನು ಇದು ಯೋಗೇಶ್ವರ್ ಕೊಡುಗೆ ಎಂದು ಹೇಳಿದೆ ಎಂದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಭಾವನಾತ್ಮಕವಾಗಿ ಕುಮಾರಸ್ವಾಮಿಯವರು ಮಾತನಾಡಿ ಲೋಕಸಭಾ ಚುನಾವಣೆ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಹಾಗಾದರೆ ಇಲ್ಲಿ ಯಾರಿಗೆ ಅನ್ಯಾಯವಾಗಿದೆ. ನಿಖಿಲ್ ಕುಮಾರಸ್ವಾಮಿ ಸೋತ ಕಾರಣಕ್ಕೆ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ” ಎಂದರು. ರಾಮನಗರ ಜಿಲ್ಲೆಯ ಜನರು ದೇವೇಗೌಡರು, ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿರುವುದು ಮನೆ ಮಗ ಯೋಗೇಶ್ವರ್ ಅವರಿಗೆ. ಇವರು ಸತ್ತರೆ ಮಣ್ಣು ಮಾಡುವುದು ಚನ್ನಪಟ್ಟಣದ ಚಕ್ಕೆರೆಯಲ್ಲಿ” ಎಂದರು.