ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ರೆಗ್ಯುಲರ್ ಬೇಲ್ ಅಥವಾ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಂಪಲ್ಲಿ ಕೋರ್ಟ್ನಲ್ಲಿ ಈ ಅರ್ಜಿಯ ವಿಚಾರಣೆಯೂ ನಡೆದಿದೆ. ಇಂದು (ಜನವರಿ 03) ನ್ಯಾಯಾಧೀಶರ ಆದೇಶ ಹೊರಬಿದ್ದಿದ್ದು, ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ.
ಅಲ್ಲು ಅರ್ಜುನ್ಗೆ ಈಗ ಷರತ್ತು ಬದ್ಧ ಜಾಮೀನು ಮಂಜೂರಾಗಿದ್ದು, ಜಾಮೀನು ನೀಡಿರುವ ನಾಂಪಲ್ಲಿ ನ್ಯಾಯಾಲಯ, 1 ಲಕ್ಷ ರೂಪಾಯಿ ಭದ್ರತಾ ಮೊತ್ತ ಮತ್ತು ಇಬ್ಬರು ವ್ಯಕ್ತಿಗಳ ಶೂರಿಟಿಯನ್ನು ಕೇಳಿದೆ. ವಿದೇಶ ಪ್ರಯಾಣದ ಮೇಲೆ ಯಾವುದೇ ನಿರ್ಭಂಧ ವಿಧಿಸಿಲ್ಲ ಎನ್ನಲಾಗುತ್ತಿದೆ. ಜಾಮೀನು ದೊರೆತಿರುವ ಕಾರಣ ನಿರಾಳರಾಗಿರುವ ಅಲ್ಲು ಅರ್ಜುನ್, ಮುಂದಿನ ಹೆಜ್ಜೆಯಾಗಿ ತಮ್ಮ ಮೇಲಿನ ಪ್ರಕರಣ ರದ್ದು ಪಡಿಸಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಇದೇ ಪ್ರಕರಣದಲ್ಲಿ ‘ಪುಷ್ಪ 2’ ಸಿನಿಮಾದ ನಿರ್ಮಾಪಕರ ಮೇಲೂ ಎಫ್ಐಆರ್ ದಾಖಲಾಗಿತ್ತು. ಆದರೆ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದ ಮೈತ್ರಿ ಮೂವಿ ಮೇಕರ್ಸ್ ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಮನವಿ ಮಾಡಿದ್ದರು. ಆದೇಶ ನೀಡಿದ ಹೈಕೋರ್ಟ್, ನಿರ್ಮಾಪಕರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿರುವ ಜೊತೆಗೆ ಆರೋಪಿಗಳನ್ನು ಸರಿಯಾಗಿ ಹೆಸರಿಸಿ ಮತ್ತೊಮ್ಮೆ ಪಿಟಿಷನ್ ಸಲ್ಲಿಸುವಂತೆ ಸೂಚಿಸಿದೆ.


