ಯಾರು ಇತರರಿಗಾಗಿ ಜೀವಿಸುವರೋ ಅವರೇ ನಿಜವಾದ ಅರ್ಥದಲ್ಲಿ ಮಾನವರು, ಉಳಿದವರೆಲ್ಲ ಬದಿಕಿದ್ದರೂ ಜೀವಚ್ಛವಗಳು..
– ಇದು ಸ್ವಾಮಿ ವಿವೇಕಾನಂದರ ವಾಣಿ
ಸ್ವಾಮಿ ವಿವೇಕಾನಂದರ ವಾಣಿಯಂತೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದಸ್ವಾಮೀಜಿಗಳು ಬದುಕಿ ತೋರಿಸುತ್ತಿದ್ದಾರೆ. ಬಯಲುಸೀಮೆ ಪ್ರದೇಶವಾದ ಪಾವಗಡ ತಾಲೂಕಿನ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಬಿರುಬಿಸಿಲು, ಕ್ಷಾಮದ ಕಾರಣ ಪಾವಗಡ ತಾಲೂಕಿನ ಕೆ.ರಾಂಪುರದ ಅರಣ್ಯ ಪ್ರದೇಶದಲ್ಲಿ ಸಾವಿರಾರು ನವಿಲುಗಳು, ಮಂಗಗಳು, ಕರಡಿಗಳು ಸರಿಯಾದ ನೀರು ಹಾಗೂ ಆಹಾರ ದೊರೆಯದೆ ಒದ್ದಾಡುತ್ತಿದ್ದವು. ಈ ವಿಚಾರ ತಿಳಿದ ಜಪಾನಂದ ಸ್ವಾಮೀಜಿ ತಮ್ಮ ಬಳಗದೊಂದಿಗೆ ತೆರಳಿ ವನ್ಯಜೀವಿಗಳಿಗೆ ನೀರು, ಆಹಾರ ಕಲ್ಪಿಸುವ ಕೆಲಸ ಮಾಡಿದ್ದಾರೆ.
ಬೃಹತ್ ನೀರಿನ ಟ್ಯಾಂಕರ್, ಪಂಪ್ ಸೆಟ್ ಹಾಗು ಇತರೆ ಪರಿಕರಗಳೊಂದಿಗೆ ಕೆ.ರಾಂಪುರದ ಅರಣ್ಯಕ್ಕೆ ತೆರಳಿದ ಜಪಾನಂದ ಸ್ವಾಮೀಜಿ, ಅಲ್ಲಿಯ ದೊಣೆ ಹಾಗೂ ಹೊಂಡಗಳಿಗೆ ನೀರನ್ನು ತುಂಬಿಸಿದ್ದಾರೆ.
ನೆಲದಿಂದ 60 ಅಡಿ ಎತ್ತರದಲ್ಲಿರುವ ದೊಣೆಗೆ ಪ್ಲಾಸ್ಟಿಕ್ ಹೊದಿಕೆ ಹಾಸಿ ನೀರು ಇಂಗದಂತೆ ವ್ಯವಸ್ಥೆ ಕಲ್ಪಿಸಿ ಟ್ಯಾಂಕರ್ ನೀರನ್ನು ಪಂಪ್ಸೆಟ್ ಮೂಲಕ ಹರಿಸಿದ್ದಾರೆ
ಅಲ್ಲದೇ, ಅರಣ್ಯದ ಮಧ್ಯೆ ಜೋಳ, ಕಾಳನ್ನು ಚೆಲ್ಲಿ ನವಿಲುಗಳಿಗೆ ಆಹಾರ ದೊರೆಯುವಂತೆ ಮಾಡಿದ್ದಾರೆ. ಜಪಾನಂದಸ್ವಾಮೀಜಿ ಮಾಡಿದ ಸತ್ಕಾರ್ಯದಿಂದ ಕರೀಮೂತಿಯ ಕಪಿಗಳು, ಕರಡಿ ಹಾಗೂ ನವಿಲುಗಳಿಗೆ ಕೊಂಚ ಉಸಿರುಬಂದಿದೆ.
ಈ ಸೇವಾಯಜ್ಞದಲ್ಲಿ ಆಶ್ರಮದ ಸಂಯೋಜಕರಾದ ಡಿ.ಎಸ್.ಕಮಲಬಾಬು, ಭರತರಾಮ್ ಮೂರ್ತಿ, ಶ್ರೀನಿವಾಸ್ ಹಾಗೂ ಕೆ.ರಾಂಪುರದ ಆನಂದ್, ನಾಗೇಶ್, ಗೋಪಿ ಹಾಗೂ ಇತತರು ಜಪಾನಂದ ಸ್ವಾಮೀಜಿ ಜೊತೆ ಪಾಲ್ಗೊಂಡಿದ್ದರು.
ಅಂದ ಹಾಗೆ, ಮುಂಗಾರು ಮಳೆ ಬರುವವರೆಗೂ ಪ್ರತಿವಾರ ಸಾವಿರಾರು ನವಿಲುಗಳು, ಪಕ್ಷಿಗಳು, ನೂರಾರು ಕೋತಿಗಳು, ಕರಡಿಗಳಿಗೆ ಅಗತ್ಯವಿರುವ ನೀರು, ಆಹಾರವನ್ನು ಒದಗಿಸಲು ಶ್ರೀರಾಮಕೃಷ್ಣಾಶ್ರಮ ನಿರ್ಧರಿಸಿದೆ