ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ದೊಡ್ಡ ಶಾಕ್ ನೀಡಿದೆ. ಪ್ರತಿ ವರ್ಷ ಪರೀಕ್ಷೆಗೆ ಮುನ್ನ ನೀಡಲಾಗುತ್ತಿದ್ದ ಒಂದು ತಿಂಗಳ ‘ಸ್ಟಡಿ ಹಾಲಿಡೇ’ ನಿಯಮವನ್ನು ಈ ಬಾರಿ ರದ್ದುಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಬಂದೇ ಪರೀಕ್ಷಾ ಸಿದ್ಧತೆ ನಡೆಸಬೇಕೆಂದು ಆದೇಶಿಸಿದೆ.
ವಿದ್ಯಾರ್ಥಿಗಳು ಮನೆಯಲ್ಲಿದ್ದರೆ ಸಮಯ ವ್ಯರ್ಥ ಮಾಡುತ್ತಾರೆ ಮತ್ತು ಅಧ್ಯಯನದ ಕಡೆಗೆ ಗಮನ ಹರಿಸುವುದಿಲ್ಲ ಎಂಬ ಕಾರಣಕ್ಕೆ ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಫೆಬ್ರವರಿ 26 ರವರೆಗೆ ಎಲ್ಲಾ ಕಾಲೇಜುಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಇಲಾಖೆಯ ಈ ನಿರ್ಧಾರಕ್ಕೆ ಶಿಕ್ಷಣ ತಜ್ಞರು ಮತ್ತು ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಕೆಲವು ಮಕ್ಕಳಿಗೆ ಏಕಾಂತದಲ್ಲಿ ಓದಿದರೆ ಮಾತ್ರ ಅರ್ಥವಾಗುತ್ತದೆ, ಗುಂಪಿನಲ್ಲಿ ಓದುವುದು ಎಲ್ಲರಿಗೂ ಒಗ್ಗುವುದಿಲ್ಲ” ಎಂಬ ವಾದಗಳು ಕೇಳಿಬರುತ್ತಿವೆ. ತಜ್ಞರೊಂದಿಗೆ ಚರ್ಚಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.


