ಚಿಕ್ಕೋಡಿ: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯದ ಕನಸುಗಳೊಂದಿಗೆ ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕಿದ್ದಾರೆ. ಆದ್ರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಪರೀಕ್ಷೆಗೆ ಹೊರಡಲು ಸಜ್ಜಾಗಿದ್ದ 17 ವರ್ಷದ ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ.

ಮೃತ ಭೂಮಿಕಾ ಮಾಳಂಗಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಕಳೆದ ಹಲವು ತಿಂಗಳುಗಳಿಂದ ಕಠಿಣ ಪರಿಶ್ರಮ ಪಟ್ಟಿದದ್ರು. ಇಂದಿನಿಂದ ಮೊದಲ ಪರೀಕ್ಷೆ ಆರಂಭವಾಗಲಿರುವ ಕಾರಣ, ಮನೆಯಲ್ಲಿ ಪೋಷಕರು ಮತ್ತು ಭೂಮಿಕಾ ಸಕಲ ಸಿದ್ಧತೆ ಮಾಡಿಕೊಂಡಿದ್ರು. ಇಂದು ಬೆಳಿಗ್ಗೆ ಎದ್ದು ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದ ಭೂಮಿಕಾ, ಅತ್ಯಂತ ಉತ್ಸಾಹದಿಂದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಿದ್ಧರಾಗಿದ್ದು ಪರೀಕ್ಷೆಗೆ ಹೋಗುವ ಮುನ್ನ ಭೂಮಿಕಾ ಸ್ನಾನ ಮುಗಿಸಿ ಮನೆಯಿಂದ ಹೊರಬಂದಿದ್ರು. ಆ ವೇಳೆ ಹಠಾತ್ತನೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣ ಎಚ್ಚೆತ್ತ ಪೋಷಕರು ಆತಂಕಗೊಂಡಿದ್ದು, ಸಮಯ ವ್ಯರ್ಥ ಮಾಡದೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ ವಿಧಿಯ ಕ್ರೂರ ಆಟಕ್ಕೆ ಭೂಮಿಕಾ ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ರಾಜ್ಯದ ಸುಮಾರು 7,10,363 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲು ಕೇಂದ್ರಗಳಿಗೆ ಹಾಜರಾಗಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯಾಪಕ ಬಂದೋಬಸ್ತ್ ಮಾಡಿವೆ. ಎಲ್ಲೆಡೆ ಪರೀಕ್ಷೆಯ ಸಂಭ್ರಮ ಮತ್ತು ಗಂಭೀರತೆ ನೆಲೆಸಿದ್ದರೆ, ಬಂಬಲವಾಡದಲ್ಲಿ ಮಾತ್ರ ತನ್ನ ಮಗಳ ಭವಿಷ್ಯದ ಮೇಲೆ ಕೋಟಿ ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಯ ಮಡಿಲು ಶೂನ್ಯವಾಗಿದೆ.


