ಮೈಸೂರು: ವಕ್ಫ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಿದ್ದ ನೊಟೀಸ್ ವಾಪಸ್ ಪಡೆಯಲು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿರುವ ವಿಷಯವಾಗಿ ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನೊಟೀಸ್ ವಾಪಸ್ ತೆಗೆದುಕೊಳ್ಳಿ ಎಂದು ಸೂಚಿಸಿದರೆ ಸಮಸ್ಯೆ ಬಗೆಹರಿಯುತ್ತಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಉದ್ದೇಶ ಶುದ್ದಿ ಇದ್ದರೆ, ನೊಟೀಸ್ ವಾಪಸ್ ತೆಗೆದುಕೊಳ್ಳಿ ಎಂದು ಸೂಚನೆ ನೀಡುವ ಬದಲು ಗೆಝೆಟ್ ನೋಟಿಫಿಕೇಶನ್ನ್ನು ವಾಪಸ್ ಪಡೆಯಲಿ ಎಂದು ಸವಾಲು ಹಾಕಿದ್ದು, ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ವಕ್ಫ್ ಗೆ ಏಕೆ ಅನ್ವಯ ಮಾಡುತ್ತಿಲ್ಲ? ಎಂದು ಪ್ರಶ್ನೆ ಮಾಡಿರು. ರೈತರೆಡೆಗೆ ಸಿಎಂಗೆ ನಿಜವಾದ ಕಾಳಜಿ ಇದ್ದರೆ, ಗೆಝೆಟ್ ನೋಟಿಫಿಕೇಶನ್ನ್ನು ವಾಪಸ್ ಪಡೆಯಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ವಕ್ಫ್ ವಿಚಾರದಲ್ಲಿ ವಿಪಕ್ಷಗಳು ಶಾಂತಿ ಕದಡುವ ಕೆಲಸ ಮಾಡುತ್ತಿವೆ ಎಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ ಅವರು, ಗಲಭೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ಪ್ರಕರಣಗಳನ್ನು ವಾಪಸ್ ಪಡೆಯಲು ಬಿಜೆಪಿ ಹೇಳಿತ್ತಾ? ನೊಟೀಸ್ ಕೊಡುವುದಕ್ಕೆ ನಾವು ಹೇಳಿದ್ದೆವಾ?
ಮುಸ್ಲಿಂ ಸಮುದಾಯವನ್ನು ಓಲೈಸಲು ಮುಂದಾಗಿರುವ ಸಿದ್ದರಾಮಯ್ಯ ಸುನ್ನತ್ ಮಾಡಿಸಿಕೊಳ್ಳುವುದಷ್ಟೇ ಬಾಕಿ, ಉಳಿದ ಎಲ್ಲಾ ದೃಷ್ಟಿಯಿಂದಲೂ ಸಿಎಂ ಸಂಪೂರ್ಣವಾಗಿ ಮುಸ್ಲಿಂ ಆಗಿದ್ದಾರೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.