ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕವಾಗಿದ್ದಾರೆ. ಶುಕ್ರವಾರ (ಜು.26) ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಜನೀಶ್ ಗೋಯಲ್ ಅವರಿಂದ ತೆರವಾಗೋ ಸ್ಥಾನಕ್ಕೆ ಅವರ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೊಯಲ್ ಅವರ ಪತ್ನಿಯವರನ್ನ ನೇಮಕ ಮಾಡುವ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಇದೇ ತಿಂಗಳ ಜುಲೈ 31ಕ್ಕೆ ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ನಿವೃತ್ತಿ ಹೊಂದಲಿದ್ದಾರೆ. ನಂತರ ತೆರವಾಗುವ ಸ್ಥಾನಕ್ಕೆ ರಜನೀಶ್ ಗೋಯಲ್ ಅವರ ಪತ್ನಿಯೂ ಆಗಿರುವ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರನ್ನ ನೇಮಕ ಮಾಡಲಾಗಿದೆ. ಆಗಸ್ಟ್ 1 ರಿಂದ ಶಾಲಿನಿ ರಜನೀಶ್ ಅವರು ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 1989ರ ಬ್ಯಾಚ್ನ ಐಎಎಸ್ ಅಧಿಕಾರಿ ಆಗಿರುವ ಶಾಲಿನಿ ಅವರ ಸೇವಾವಧಿ 2027ರ ಜೂನ್ 30ರ ವರೆಗೆ ಇರಲಿದ್ದು, ಮೂರು ವರ್ಷಗಳ ಕಾಲ ದೀರ್ಘಾವಧಿ ಸೇವೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದಲ್ಲಿ ಸಿಎಸ್ ಆದ 2ನೇ ದಂಪತಿ:
ಈ ಹಿಂದೆ 2000 ಇಸವಿಯಲ್ಲಿ ಬಿ.ಕೆ ಭಟ್ಟಾಚಾರ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2000 ಇಸವಿ ಜನವರಿ 1 ರಿಂದ 2002ರ ಅವಧಿಯಲ್ಲಿ ಅವರ ಪತ್ನಿ ತೆರೆಸಾ ಭಟ್ಟಾಚಾರ್ಯ ಸಿಎಸ್ ಆಗಿ ಸೇವೆ ಸಲ್ಲಿಸಿದ್ದರು. ಈ ಮೂಲಕ ಕರ್ನಾಟಕದಲ್ಲಿ ಸಿಎ ಆಗಿ ಸೇವೆ ಸಲ್ಲಿಸಿದ್ದ ಮೊಟ್ಟ ಮೊದಲ ದಂಪತಿಯಾಗಿದ್ದರು. ರಜನೀಶ್ ಗೋಯಲ್ ಮತ್ತು ಶಾಲಿನಿ ರಜನೀಶ್ ಮುಖ್ಯಕಾರ್ಯದರ್ಶಿಗಳಾದ 2ನೇ ದಂಪತಿಯಾಗಿದ್ದಾರೆ.